ADVERTISEMENT

ಸುಶಾಂತ್ ಪ್ರಕರಣ: ಕೇಂದ್ರ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್‌ ನೋಟಿಸ್‌

ಪಿಟಿಐ
Published 15 ಸೆಪ್ಟೆಂಬರ್ 2020, 10:25 IST
Last Updated 15 ಸೆಪ್ಟೆಂಬರ್ 2020, 10:25 IST
ಸುಶಾಂತ್‌ ಸಿಂಗ್‌ ರಜಪೂತ್‌ 
ಸುಶಾಂತ್‌ ಸಿಂಗ್‌ ರಜಪೂತ್‌    

ಮುಂಬೈ: ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ ಪ್ರಕರಣದ ಕುರಿತು ಮಾಧ್ಯಮಗಳು ವರದಿ ಮಾಡುವುದನ್ನು ನಿರ್ಬಂಧಿಸಬೇಕೆಂದು ಕೋರಿ ಸ್ವಯಂ ಸೇವಾ ಸಂಸ್ಥೆಯೊಂದು (ಎನ್‌ಜಿಒ) ಅರ್ಜಿ ಸಲ್ಲಿಸಿದೆ. ಸಂಬಂಧ ಬಾಂಬೆ ಹೈಕೋರ್ಟ್‌‌, ಕೇಂದ್ರ ಸರ್ಕಾರಕ್ಕೆ ಮಂಗಳವಾರ ನೋಟಿಸ್‌ ಜಾರಿಗೊಳಿಸಿದೆ.

ಸುಶಾಂತ್‌ ಪ್ರಕರಣದಲ್ಲಿ ಮಾಧ್ಯಮಗಳು ನಡೆದುಕೊಳ್ಳುತ್ತಿರುವ ರೀತಿಯನ್ನು ಪ್ರಶ್ನಿಸಿ ಈಗಾಗಲೇ ಪುಣೆ ಮೂಲದ ಚಿತ್ರ ನಿರ್ಮಾಪಕ ನೀಲೇಶ್‌ ನಾವಲಖಾ ಮತ್ತು ಇತರ ಮೂವರು ಹಾಗೂ ಮಹಾರಾಷ್ಟ್ರದ ಎಂಟು ಮಂದಿ ನಿವೃತ್ತ ಪೊಲೀಸ್‌ ಅಧಿಕಾರಿಗಳು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದಾರೆ.

ಮುಖ್ಯ ನ್ಯಾಯಾಧೀಶ ದೀಪಾಂಕರ್‌ ದತ್ತ ಅವರನ್ನೊಳಗೊಂಡ ಪೀಠವು ಅಕ್ಟೋಬರ್‌ 8ರಂದು ಒಟ್ಟಿಗೆ ಈ ಮೂರೂ ಅರ್ಜಿಗಳ ವಿಚಾರಣೆ ನಡೆಸಲು ನಿರ್ಧರಿಸಿದೆ.

ADVERTISEMENT

ಅರ್ಜಿಯ ವಿಚಾರಣೆ ಮುಗಿಯುವವರೆಗೂ ಸುಶಾಂತ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಯಾವುದೇ ಸುದ್ದಿ ಬಿತ್ತರವಾಗದಂತೆ ತಡೆಯಬೇಕೆಂದು ‘ಇನ್‌ ಪರ್ಸ್ಯೂಟ್‌ ಆಫ್‌ ಜಸ್ಟೀಸ್‌’ ಸ್ವಯಂ ಸೇವಾ ಸಂಸ್ಥೆಯು ಅರ್ಜಿಯಲ್ಲಿ ಮನವಿ ಮಾಡಿದೆ.

ಮಾಧ್ಯಮಗಳು ಈಗಾಗಲೇ ಸುಶಾಂತ್‌ ಅವರ ವೈಯಕ್ತಿಕ ಸಂಭಾಷಣೆ, ಆರೋಪಿ ಮತ್ತು ಆಸ್ಪತ್ರೆಯ ಸಿಬ್ಬಂದಿಯ ಹೇಳಿಕೆಗಳನ್ನು ಪ್ರಕಟಿಸಿವೆ.‍ಪ್ರಕರಣದ ತೀರ್ಪು ಹೊರಬೀಳುವ ಮುನ್ನವೇ ಆರೋಪಿಯನ್ನು ಕೊಲೆಗಾರ್ತಿ, ‘ಗೋಲ್ಡ್‌ ಡಿಗ್ಗರ್‌’, ‘ಅಬೇಟರ್‌’ ಹೀಗೆ ಹಲವು ಬಗೆಯಲ್ಲಿ ಸಂಬೋಧಿಸಲಾಗುತ್ತಿದೆ. ಇದರಿಂದ ಪ್ರಕರಣದ ತನಿಖೆಯ ಹಾದಿ ತಪ್ಪುವ ಸಾಧ್ಯತೆ ಇದೆ’ ಎಂದೂ ಅರ್ಜಿಯಲ್ಲಿ ದೂರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.