ADVERTISEMENT

Telangana | ಕಾಂಗ್ರೆಸ್ ಮಣಿಸಲು ಒಂದಾದ ಬಿಜೆಪಿ, ಬಿಆರ್‌ಎಸ್: ರೇವಂತ ರೆಡ್ಡಿ

ಪಿಟಿಐ
Published 6 ನವೆಂಬರ್ 2025, 4:33 IST
Last Updated 6 ನವೆಂಬರ್ 2025, 4:33 IST
<div class="paragraphs"><p>ರೇವಂತ ರೆಡ್ಡಿ</p></div>

ರೇವಂತ ರೆಡ್ಡಿ

   

ಹೈದರಾಬಾದ್‌: ಜುಬಿಲಿ ಹಿಲ್ಸ್‌ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಸೋಲಿಸಲು ಬಿಜೆಪಿ ಮತ್ತು ಬಿಆರ್‌ಎಸ್‌ ಪಕ್ಷಗಳು ಒಂದಾಗಿವೆ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಬುಧವಾರ ಆರೋಪಿಸಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ನವೀನ್ ರೆಡ್ಡಿ ಪರ ಯುಸೂಫ್‌ಗಢದಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿರುವ ಮುಖ್ಯಮಂತ್ರಿ, ಕೇಂದ್ರ ಸಚಿವ ಜಿ. ಕಿಶನ್‌ ರೆಡ್ಡಿ ಹಾಗೂ ಬಿಆರ್‌ಎಸ್‌ ಕಾರ್ಯಾಧ್ಯಕ್ಷ ಕೆ.ಟಿ. ರಾಮ ರಾವ್‌ (ಕೆಟಿಆರ್‌) ಅವರು ಒಂದೇ ನಾಣ್ಯದ ಎರಡು ಮುಖಗಳೆಂದು ಟೀಕಿಸಿದ್ದಾರೆ.

ADVERTISEMENT

ರಾಜ್ಯದಲ್ಲಿ ಈ ಹಿಂದೆ ಬಿಆರ್‌ಎಸ್‌ ಅಧಿಕಾರದಲ್ಲಿದ್ದಾಗ ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದ ಪಕ್ಷಗಳು (ಬಿಆರ್‌ಎಸ್‌, ಬಿಜೆಪಿ) ಇದೀಗ, ಕಾಂಗ್ರೆಸ್‌ ಅನ್ನು ಸೋಲಿಸಲು ಒಂದಾಗಿವೆ ಎಂದು ವ್ಯಂಗ್ಯವಾಡಿದ್ದಾರೆ.

ಬಿಆರ್‌ಎಸ್‌ ಸರ್ಕಾರದ ಅವಧಿಯಲ್ಲಿ ನಿರ್ಮಾಣಗೊಂಡ ಕಾಳೇಶ್ವರಂ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿರೋಧಿಸಿದ್ದರು. ಯೋಜನೆಯು ಆಗಿನ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ (ಕೆಸಿಆರ್‌) ಅವರ ಪಾಲಿಗೆ ಎಟಿಎಂ ಇದ್ದಂತೆ ಎಂದು ಬಣ್ಣಿಸಿದ್ದರು. ಆ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಕಿಶನ್‌ ರೆಡ್ಡಿ ಆಗ್ರಹಿಸಿದ್ದರು. ಕೆಸಿಆರ್‌ ಹಾಗೂ ಅವರ ಸಂಬಂಧಿ, ನೀರಾವರಿ ಸಚಿವ ಟಿ. ಹರೀಶ್‌ ರಾವ್‌ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದರು ಎಂದು ನೆನಪಿಸಿದ್ದಾರೆ.

ಕಾಳೇಶ್ವರಂ ಯೋಜನೆಯ ಹಗರಣಗಳಿಗೆ ಸಂಬಂಧಿಸಿದಂತೆ ನಮ್ಮ ಸರ್ಕಾರ ಮೂರು ತಿಂಗಳ ಹಿಂದೆಯೇ ಸಿಬಿಐಗೆ ದೂರು ನೀಡಿದೆ. ಆದಾಗ್ಯೂ, ತನಿಖಾ ಸಂಸ್ಥೆ ಇನ್ನೂ ಎಫ್‌ಐಆರ್‌ ದಾಖಲಿಸಿಕೊಂಡಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ.

'ಫಾರ್ಮುಲಾ ಇ ರೇಸ್‌' ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಟಿಆರ್‌ ಅವರನ್ನು ಬಂಧಿಸಲು ಎಸಿಬಿ ಸಲ್ಲಿಸಿರುವ ಮನವಿ ಕಳೆದೆರಡು ತಿಂಗಳಿನಿಂದ ರಾಜ್ಯಪಾಲರ ಬಳಿ ಬಾಕಿ ಉಳಿದಿದೆ ಎಂದು ಉಲ್ಲೇಖಿಸಿರುವ ಸಿಎಂ, 'ಇದರ ಹಿಂದಿನ ರಹಸ್ಯವೇನು ಎಂದು ನೀವು ಆಲೋಚಿಸುವಿರಿ' ಎಂದಿದ್ದಾರೆ.

ಬಿಆರ್‌ಎಸ್‌ ಮತ್ತು ಬಿಜೆಪಿ ಶೀಘ್ರದಲ್ಲೇ ವಿಲೀನಗೊಳ್ಳಲಿದೆ ಎಂದೂ ಹೇಳಿದ್ದಾರೆ.

ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಅಜರುದ್ದೀನ್‌ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕಿಶನ್‌ ರೆಡ್ಡಿ ವಿರುದ್ಧವೂ ರೇವಂತ ರೆಡ್ಡಿ ಗುಡುಗಿದ್ದಾರೆ.

ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರನ್ನು ಸಚಿವರನ್ನಾಗಿಸಿದರೆ, ಕಿಶನ್‌ ರೆಡ್ಡಿ ಅವರಿಗೇನು ಸಮಸ್ಯೆ ಎಂದು ಕೇಳಿದ್ದಾರೆ.

'ಕಾಂಗ್ರೆಸ್ ಸರ್ಕಾರ, ಅಲ್ಪಸಂಖ್ಯಾತರಿಗೆ ಸಾಕಷ್ಟು ಅವಕಾಶಗಳನ್ನು ನೀಡಿದೆ. ಅಲ್ಪಸಂಖ್ಯಾತರಿಗೆ ದೊಡ್ಡ ಹುದ್ದೆಗಳನ್ನು ನೀಡುವುದು ಕಾಂಗ್ರೆಸ್‌ ಮಾತ್ರ. ಕಾಂಗ್ರೆಸ್‌ ಎಂದರೆ, ಮುಸ್ಲಿಮರು. ಮುಸ್ಲಿಮರೆಂದರೆ ಕಾಂಗ್ರೆಸ್‌' ಎಂದು ಪ್ರತಿಪಾದಿಸಿದ್ದಾರೆ.

ಉಪ ಚುನಾವಣೆ
ಜುಬಿಲಿ ಹಿಲ್ಸ್‌ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ, ಬಿಆರ್‌ಎಸ್‌ನ ಮಂಗಟಿ ಗೋಪಿನಾಥ್‌ ಅವರು ಇದೇ ವರ್ಷ ಜೂನ್‌ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಹೀಗಾಗಿ, ತೆರವಾಗಿರುವ ಸ್ಥಾನಕ್ಕೆ ಉಪ ಚುನಾವಣೆ ನಿಗದಿಯಾಗಿದೆ. ನವೆಂಬರ್‌ 11ರಂದು ಮತದಾನ ನಡೆಯಲಿದೆ.

ಗೋಪಿನಾಥ್‌ ಅವರ ಪತ್ನಿ ಸುನೀತ ಅವರನ್ನು ಬಿಆರ್‌ಎಸ್‌ನಿಂದ ಕಣಕ್ಕಿಳಿಸಿದೆ. ದೀಪಕ್‌ ರೆಡ್ಡಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್‌ನ ನವೀನ್ ರೆಡ್ಡಿ ಅವರಿಗೆ ಅಸಾದುದ್ದೀನ್‌ ಓವೈಸಿ ಅವರ ಎಐಎಂಐಎಂ ಬೆಂಬಲ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.