ADVERTISEMENT

ಶ್ರೀರಾಮನಿಗೆ ಚಿನ್ನ ಲೇಪಿತ ಪಾದುಕೆ ಅರ್ಪಿಸಲು 8,000 ಕಿ.ಮೀ ಪಾದಯಾತ್ರೆ!

ಮೂಲತಃ ಸೌಂಡ್ ಎಂಜಿನಿಯರ್ ಆಗಿರುವ ಹೈದರಾಬಾದ್ ಮೂಲದ ಚಲ್ಲಾ ಶ್ರೀನಿವಾಸ್ ಶಾಸ್ತ್ರೀ ಎಂಬ ರಾಮ ಭಕ್ತ ಈ ಪಾದಯಾತ್ರೆ ಕೈಗೊಂಡಿರುವವರು.

ಪಿಟಿಐ
Published 6 ಜನವರಿ 2024, 12:57 IST
Last Updated 6 ಜನವರಿ 2024, 12:57 IST
<div class="paragraphs"><p>ಚಲ್ಲಾ ಶ್ರೀನಿವಾಸ್ ಶಾಸ್ತ್ರೀ</p></div>

ಚಲ್ಲಾ ಶ್ರೀನಿವಾಸ್ ಶಾಸ್ತ್ರೀ

   

Xಚಿತ್ರ

ಹೈದರಾಬಾದ್: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಆಗುತ್ತಿರುವ ಹಿನ್ನೆಲೆಯಲ್ಲಿ ಭಕ್ತರೊಬ್ಬರು ಚಿನ್ನ ಲೇಪಿತ ಪಾದುಕೆಗಳನ್ನು ತಲುಪಿಸಲು ರಾಮೇಶ್ವರದಿಂದ ಪಾದಯಾತ್ರೆ ಕೈಗೊಂಡಿದ್ದಾರೆ.

ADVERTISEMENT

ಮೂಲತಃ ಸೌಂಡ್ ಎಂಜಿನಿಯರ್ ಆಗಿರುವ ಹೈದರಾಬಾದ್ ಮೂಲದ ಚಲ್ಲಾ ಶ್ರೀನಿವಾಸ್ ಶಾಸ್ತ್ರೀ (54) ಎಂಬ ರಾಮ ಭಕ್ತ ಈ ಪಾದಯಾತ್ರೆ ಕೈಗೊಂಡಿರುವವರು.

ಪಂಚಲೋಹಗಳಿಂದ ಮಾಡಿದ ಸಂಪೂರ್ಣ ಚಿನ್ನ ಲೇಪಿತ ಪಾದುಕೆಗಳನ್ನು ಶ್ರೀರಾಮನಿಗೆ ಅರ್ಪಿಸಲು ತೆರಳುತ್ತಿದ್ದೇನೆ. ಪಾದುಕೆ ಸೇರಿ ದೇವಾಲಯಕ್ಕೆ ಸಲ್ಲಿಸುವ ಆಭರಣ, ಪರಿಕರಗಳು ಸುಮಾರು ₹ 65 ಲಕ್ಷ ಬೆಲೆ ಬಾಳುತ್ತವೆ ಎಂದು ಅವರು ತಿಳಿಸಿದ್ದಾರೆ.

ಜುಲೈ 20ರಿಂದ ಪಾದಯಾತ್ರೆ ಪ್ರಾರಂಭಿಸಿರುವ ಶಾಸ್ತ್ರೀ ಅವರು, ಇದೀಗ ಅಯೋಧ್ಯೆಯ ಸನಿಹ ಇದ್ದಾರೆ. ಮಂದಿರ ಜ. 22ರಂದು ಉದ್ಘಾಟನೆಯಾಗುತ್ತಿದ್ದು ಅದಕ್ಕೂ ಮೊದಲೇ ಅಯೋಧ್ಯೆ ತಲುಪಿ ಪಾದುಕೆಗಳನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಮುಖಾಂತರ ಟ್ರಸ್ಟ್‌ಗೆ ಸಲ್ಲಿಸಲಿದ್ದಾರೆ.

‘ನನ್ನ ತಂದೆ ರಾಮಮಂದಿರ ಹೋರಾಟದಲ್ಲಿ ಕರಸೇವಕರಾಗಿದ್ದರು. ಮಂದಿರ ನಿರ್ಮಾಣವಾಗಬೇಕು. ಭಗವಾನ್ ರಾಮನಿಗೆ ಚಿನ್ನದ ಪಾದುಕೆ ಕೊಡಬೇಕು ಎಂಬುದು ಅವರ ಕನಸಾಗಿತ್ತು. ಆದರೆ, ಇಂದು ಅವರು ಇಲ್ಲ. ಅವರ ಆಸೆಯನ್ನು ನಾನು ಈಡೇರಿಸುತ್ತಿದ್ದೇನೆ. ಪಾದಯಾತ್ರೆ ಸುಮಾರು 8 ಸಾವಿರ ಕಿ.ಮೀ ಸಾಗಲಿದೆ’ ಎಂದು ಅವರು ತಿಳಿಸಿದ್ದಾರೆ.

‘ವನವಾಸದ ಸಂದರ್ಭದಲ್ಲಿ ಭಗವಾನ್ ರಾಮ ಅಯೋಧ್ಯೆಯಿಂದ ತಮಿಳುನಾಡಿನ ರಾಮೇಶ್ವರದವರೆಗೆ ಸಾಗಿದ ಮಾರ್ಗವನ್ನು ಸ್ನೇಹಿತರಾದ ಡಾ. ರಾಮಾವತಾರ್ ಅವರು ಕಂಡುಕೊಂಡಿದ್ದು ಅದೇ ಮಾರ್ಗದ ಮೂಲಕ ಶಿವಲಿಂಗಗಳನ್ನು ಸಂದರ್ಶಿಸುತ್ತಾ ಪಾದಯಾತ್ರೆ ಕೈಗೊಂಡಿದ್ದೇನೆ’ ಎಂದು ಶಾಸ್ತ್ರೀ ಅವರು ವಿವರಿಸಿದ್ದಾರೆ.

ಅಯೋಧ್ಯೆಯಲ್ಲಿ ಒಂದು ಸಮಾಜ ಸೇವಾ ಸಂಸ್ಥೆ ಸ್ಥಾಪಿಸಿ ಅಲ್ಲಿಯೇ ಮನೆ ಕಟ್ಟಿಕೊಂಡು ನೆಲೆಸಲು ನಿರ್ಧರಿಸಿದ್ದೇನೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿಗಾರರಿಗೆ ಶಾಸ್ತ್ರೀ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.