ADVERTISEMENT

ಬ್ಯಾಂಕ್‌ಗೆ ವಂಚನೆ ಪ್ರಕರಣ: ಪಂಜಾಬ್‌ ಎಎಪಿ ಶಾಸಕರ ಮನೆಯಲ್ಲಿ ಸಿಬಿಐ ಶೋಧ

ಪಿಟಿಐ
Published 7 ಮೇ 2022, 14:19 IST
Last Updated 7 ಮೇ 2022, 14:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ₹ 40.92 ಕೋಟಿ ಸಾಲ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಪಂಜಾಬ್ ಎಎಪಿ ಶಾಸಕ ಜಸ್ವಂತ್ ಸಿಂಗ್ ಗಜ್ಜನ್ ಮಜ್ರಾ ಅವರ ಸಂಗ್ರೂರ್‌ನಲ್ಲಿರುವ ಮೂರು ಮನೆಗಳು ಹಾಗೂ ಕಚೇರಿಯಲ್ಲಿ ಸಿಬಿಐ ಶನಿವಾರ ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ಯಾಂಕ್ ಆಫ್ ಇಂಡಿಯಾದಿಂದ ಸಾಲ ಪಡೆದು ವಂಚಿಸಿದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದ ನಂತರ ನಡೆಸಲಾದ ಶೋಧದ ವೇಳೆ, ವಿವಿಧ ವ್ಯಕ್ತಿಗಳ ಸಹಿಯನ್ನು ಹೊಂದಿರುವ 94 ಖಾಲಿ ಚೆಕ್‌ಗಳನ್ನು, ಅದಕ್ಕೆ ಲಗತ್ತಿಸಿದ ಆಧಾರ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ಮೂಲಗಳು ಹೇಳಿವೆ.

‘ಶೋಧ ಸಂದರ್ಭದಲ್ಲಿ ₹16.57 ಲಕ್ಷ ನಗದು, 88 ವಿದೇಶಿ ಕರೆನ್ಸಿಗಳು, ಕೆಲವು ಆಸ್ತಿ ದಾಖಲೆಗಳು, ಹಲವು ಬ್ಯಾಂಕ್‌ ಖಾತೆಗಳು ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಸಿಬಿಐ ವಕ್ತಾರ ಆರ್‌.ಸಿ.ಜೋಶಿ ಹೇಳಿದ್ದಾರೆ.

ADVERTISEMENT

‘ಶಾಸಕ ಸಿಂಗ್ ಅವರ ತಾರಾ ಕಾರ್ಪೊರೇಷನ್ ಲಿಮಿಟೆಡ್ ಈಗ ಅದರ ಹೆಸರನ್ನು ಮಲೌಧ್ ಆಗ್ರೋ ಲಿಮಿಟೆಡ್ ಎಂದು ಮರುನಾಮಕರಣ ಮಾಡಲಾಗಿದೆ. ಶಾಸಕರ ಸಹೋದರರಾದ ಬಲ್ವಂತ್‌ ಸಿಂಗ್‌, ಕುಲ್ವಂತ್‌ ಸಿಂಗ್‌ ಮತ್ತು ಸೋದರಳಿಯ ತೇಜಿಂದರ್‌ ಸಿಂಗ್‌ ಹಾಗೂ ಸಂಸ್ಥೆಯ ನಿರ್ದೇಶಕರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಮತ್ತೊಂದು ಕಂಪನಿಯಾದ ತಾರಾ ಹೆಲ್ತ್ ಫುಡ್ಸ್ ಲಿಮಿಟೆಡ್ ಅನ್ನು ಸಹ ಎಫ್‌ಐಆರ್‌ನಲ್ಲಿ ಆರೋಪಿ ಎಂದು ಹೆಸರಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘ಈ ಕಂಪನಿಯು 2011 ರಿಂದ 2014ರ ಅವಧಿಯಲ್ಲಿ ನಾಲ್ಕು ಹಂತಗಳಲ್ಲಿ ಸಾಲ ಪಡೆದಿತ್ತು. ಆದರೆ, ಮರುಪಾವತಿಸದೇ ಸಾಲವನ್ನು ಬೇರೆ ಉದ್ದೇಶಕ್ಕೆ ಬಳಸಲಾಗಿದೆ. ಕಂಪನಿಯು ನಷ್ಟ ಅನುಭವಿಸಿದೆ ಎಂದು ಹೇಳಿ ಬ್ಯಾಂಕಿಗೆ ವಮಚಿಸಲಾಗಿತ್ತು’ ಎಂದು ಜೋಶಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.