ADVERTISEMENT

ಕಲ್ಲಿದ್ದಲು ಅಕ್ರಮ: ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಪತ್ನಿಗೆ ಸಿಬಿಐ ನೋಟಿಸ್

ಪಿಟಿಐ
Published 21 ಫೆಬ್ರುವರಿ 2021, 11:27 IST
Last Updated 21 ಫೆಬ್ರುವರಿ 2021, 11:27 IST
ಸಿಬಿಐ
ಸಿಬಿಐ   

ಕೋಲ್ಕತ್ತ: ಕಲ್ಲಿದ್ದಲು ಅಕ್ರಮ ಪ್ರಕರಣದಲ್ಲಿ ತನಿಖೆಗೆ ಸಹಕರಿಸುವಂತೆ ಟಿಎಂಸಿ ಮುಖಂಡ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ಪತ್ನಿಗೆ ಸಿಬಿಐ ಭಾನುವಾರ ನೋಟಿಸ್ ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಕೋಲ್ಕತಾ ನಿವಾಸಕ್ಕೆ ನೋಟಿಸ್ ತಲುಪಿಸಿದ್ದು, ಅಭಿಷೇಕ್ ಬ್ಯಾನರ್ಜಿ ಅವರ ಪತ್ನಿ ರುಜೀರಾ ಬ್ಯಾನರ್ಜಿಯನ್ನು ಸಿಬಿಐ ತಂಡ ಪ್ರಶ್ನಿಸುವ ಸಾಧ್ಯತೆ ಇರುವುದಾಗಿ ಮೂಲಗಳು ತಿಳಿಸಿವೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ಸಂಸ್ಥೆ ಶುಕ್ರವಾರ ಹೊಸ ಸುತ್ತಿನ ಶೋಧ ನಡೆಸಿದೆ ಎಂದು ಹೇಳಲಾಗಿದೆ.

ADVERTISEMENT

ಕಳೆದ ವರ್ಷ ನವೆಂಬರ್‌ನಲ್ಲಿ ಕಲ್ಲಿದ್ದಲು ದಂಧೆಯ ಕಿಂಗ್‌ಪಿನ್ ಮಾಂಜ್ಹಿ ಅಲಿಯಾಸ್ ಲಾಲಾ, ಈಸ್ಟರ್ನ್ ಕೋಲ್‌ಫೀಲ್ಡ್ ಲಿಮಿಟೆಡ್‌ನ ಜನರಲ್ ಮ್ಯಾನೇಜರ್ ಅಮಿತ್ ಕುಮಾರ್ ಧಾರ್ ಹಾಗೂ ಜಾಯೇಶ್ ಚಂದ್ರ ರೈ ಜೊತೆಗೆ ಇಸಿಎಲ್ ಭದ್ರತಾ ಮುಖ್ಯಸ್ಥ ತನ್ಮಯ್ ದಾಸ್, ಏರಿಯಾ ಸೆಕ್ಯುರಿಟಿ ಇನ್ಸ್‌ಪೆಕ್ಟರ್, ಕುನುಸ್ತೋರಿಯಾ ಧನಂಜಯ್ ರೈ ಮತ್ತು ಎಸ್‌ಎಸ್‌ಐ ಮತ್ತು ಕಾಜೋರ್ ಪ್ರದೇಶದ ಭದ್ರತಾ ಉಸ್ತುವಾರಿ ದೇಬಾಶಿಶ್ ಮುಖರ್ಜಿ ಅವರ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿತ್ತು.

ಕುನುಸ್ಟೋರಿಯಾ (ಈಗ ಪಾಂಡವೇಶ್ವರ ಪ್ರದೇಶ) ಮತ್ತು ಕಜೋರಾ ಪ್ರದೇಶಗಳಲ್ಲಿನ ಇಸಿಎಲ್‌ನ ಗುತ್ತಿಗೆ ಗಣಿಗಳಿಂದ ಅಕ್ರಮ ಗಣಿಗಾರಿಕೆ ಮತ್ತು ಕಲ್ಲಿದ್ದಲು ಕಳ್ಳತನದಲ್ಲಿ ಆರೋಪಿ ಮಾಂಜ್ಹಿ ಲಾಲಾ ಭಾಗಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಮುಂಬರುವ ಏಪ್ರಿಲ್-ಮೇ ತಿಂಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ನಾಯಕಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ 2011 ಮತ್ತು 2016 ರಲ್ಲಿ ಸತತ ಗೆಲುವು ಸಾಧಿಸಿದ್ದ ಆಡಳಿತಾರೂಢ ಟಿಎಂಸಿಯನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಅಭಿಯಾನವನ್ನು ಪ್ರಾರಂಭಿಸಿದೆ.

ಇದಕ್ಕೆ ತಿರುಗೇಟು ನೀಡಲು ಸಿದ್ಧರಾಗಿರುವ ಸಂಸದ ಅಭಿಷೇಕ್ ಬ್ಯಾನರ್ಜಿ ಕೂಡ ತೃಣಮೂಲ ಕಾಂಗ್ರೆಸ್‌ ಅನ್ನು ಬಲಪಡಿಸಲು ಮುಂದಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.