ADVERTISEMENT

ಶಬರಿಮಲೆ ದೇಗುಲಕ್ಕೆ ಮಹಿಳಾ ಪ್ರವೇಶ ದೃಢಪಡಿಸಿದ ಕೇರಳ ಸಿಎಂ ಪಿಣರಾಯಿ ವಿಜಯನ್

ಶುದ್ಧೀಕರಣಕ್ಕಾಗಿ ಬಾಗಿಲು ಮುಚ್ಚಿದ ದೇಗುಲ * ರಾಜ್ಯದಾದ್ಯಂತ ಪ್ರತಿಭಟನೆಗೆ ಬಿಜೆಪಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 2 ಜನವರಿ 2019, 7:22 IST
Last Updated 2 ಜನವರಿ 2019, 7:22 IST
   

ಕೊಚ್ಚಿ: ಶಬರಿಮಲೆ ದೇಗುಲಕ್ಕೆ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಇಬ್ಬರು ಮಹಿಳೆಯರು ಪ್ರವೇಶಿಸಿರುವುದನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ದೃಢಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಬರಿಮಲೆ ದೇಗುಲ ಪ್ರವೇಶಿಸಲು ಬಯಸುವ ಮಹಿಳೆಯರಿಗೆ ಭದ್ರತೆ ನೀಡಲಾಗುವುದು ಎಂದು ಸರ್ಕಾರ ಹೇಳುತ್ತಲೇ ಬಂದಿದೆ’ ಎಂದು ಹೇಳಿದರು.

ಶಬರಿಮಲೆ ದೇಗುಲ ಪ್ರವೇಶಿಸಲು ಬಯಸುವ ಎಲ್ಲ ಮಹಿಳೆಯರಿಗೆ ಸೂಕ್ತ ಭದ್ರತೆ ಕಲ್ಪಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದೂ ಪಿಣರಾಯಿ ತಿಳಿಸಿದರು.

ADVERTISEMENT

ಸುಮಾರು 40 ವರ್ಷ ವಯಸ್ಸಿನ ಬಿಂದು ಮತ್ತು ಕನಕದುರ್ಗಾ ಎಂಬುವವರು ಮುಂಜಾವ ದೇಗುಲ ಪ್ರವೇಶಿಸಿದ್ದಾರೆ. ದೇಗುಲ ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸಿದ್ದಾಗಿ ಕೋಯಿಕ್ಕೋಡ್ ನಿವಾಸಿಯಾಗಿರುವ ಬಿಂದು ತಿಳಿಸಿದ್ದಾರೆ ಎಂದು ಮಾತೃಭೂಮಿ ನ್ಯೂಸ್‌ ವರದಿ ಮಾಡಿದೆ. 18 ಮೆಟ್ಟಿಲುಗಳನ್ನೇರಿ ದೇಗುಲ ಪ್ರವೇಶಿಸಿಲ್ಲ. ಬದಲಿಗೆ ಗಣ್ಯ ವ್ಯಕ್ತಿಗಳಿಗೆ ಮೀಸಲಾದ ಸ್ಥಳದಿಂದ ಪ್ರಾರ್ಥನೆ ಸಲ್ಲಿಸಿದ್ದೇವೆ. ಪೊಲೀಸರು ನಮ್ಮನ್ನು ಹಿಂದೆ ಕಳುಹಿಸಲು ಪ್ರಯತ್ನಿಸಿಲ್ಲ ಎಂದು ಬಿಂದು ತಿಳಿಸಿದ್ದಾರೆ ಎನ್ನಲಾಗಿದೆ.

ಶುದ್ಧೀಕರಣಕ್ಕಾಗಿ ದೇಗುಲ ಬಂದ್

ಋತುಮತಿಯಾಗುವ ವಯಸ್ಸಿನ ಮಹಿಳೆಯರು ದೇಗುಲ ಪ್ರವೇಶಿಸಿರುವುದರಿಂದ ಶುದ್ಧೀಕರಣಕ್ಕಾಗಿ ಶಬರಿಮಲೆ ದೇಗುಲದ ಬಾಗಿಲು ಮುಚ್ಚಲಾಗಿದೆ, ದರ್ಶನ ಸ್ಥಗಿತಗೊಂಡಿದೆ ಎಂದು ಎಎನ್‌ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.

ಬಿಜೆಪಿಯಿಂದ ವಿರೋಧ, ಪ್ರತಿಭಟನೆ

ಶಬರಿಮಲೆ ದೇಗುಲಕ್ಕೆ ಮಹಿಳೆಯರು ಪ್ರವೇಶಿಸಿದ್ದನ್ನು ಬಿಜೆಪಿ ಖಂಡಿಸಿದೆ. ಅಲ್ಲದೆ, ರಾಜ್ಯದಾದ್ಯಂತ ಪ್ರತಿಭಟನೆ ನಡೆಸುವುದಾಗಿ ತಿಳಿಸಿದೆ. ಸಿಪಿಐ(ಎಂ) ಸರ್ಕಾರದ ಪಿತೂರಿಯಿಂದಾಗಿ ಮಹಿಳೆಯರು ದೇಗುಲ ಪ್ರವೇಶಿಸುವಂತಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.