ಲಖನೌ: ಉತ್ತರ ಪ್ರದೇಶದ ವಿಧಾನ ಪರಿಷತ್ತಿನ ಗ್ಯಾಲರಿಯಲ್ಲಿ ಹಿಂದೂ ವಿಚಾರವಾದಿ ವೀರ್ ಸಾವರ್ಕರ್ ಅವರ ಭಾವ ಚಿತ್ರವನ್ನು ಹಾಕಲಾಗಿದ್ದು, ಇದಕ್ಕೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ(ಎಸ್ಪಿ) ತೀವ್ರ ವಿರೋಧ ವ್ಯಕ್ತಪಡಿಸಿದೆ. ಆದಷ್ಟು ಬೇಗ ಚಿತ್ರ ಗ್ಯಾಲರಿಯಿಂದ ವೀರ ಸಾವರ್ಕರ್ ಭಾವಚಿತ್ರವನ್ನು ತೆಗೆಯುವಂತೆ ವಿರೋಧ ಪಕ್ಷಗಳು ಒತ್ತಾಯಿಸಿವೆ.
ಈ ಬಗ್ಗೆ ಕಾಂಗ್ರೆಸ್ ನಾಯಕ ದೀಪಕ್ ಸಿಂಗ್, ವಿಧಾನ ಪರಿಷತ್ ಸಭಾಪತಿ ಅವರಿಗೆ ಪತ್ರ ಬರೆದಿದ್ದಾರೆ.
‘ಗ್ಯಾಲರಿಯಲ್ಲಿ ವೀರ ಸಾವರ್ಕರ್ ಭಾವ ಚಿತ್ರವನ್ನು ಹಾಕುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಲಾಗಿದೆ. ಹಾಗಾಗಿ ಆದಷ್ಟು ಬೇಗ ಅವರ ಚಿತ್ರವನ್ನು ಅಲ್ಲಿಂದ ತೆಗೆಯಬೇಕು’ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
‘ಬ್ರಿಟಿಷ್ ಆಡಳಿತ ಮತ್ತು ದೇಶ ವಿಭಜಿಸಲು ಮುಸ್ಲಿಂ ಲೀಗ್ ನಾಯಕ ಮೊಹಮ್ಮದ್ ಅಲಿ ಜಿನ್ನಾ ಅವರನ್ನು ಬೆಂಬಲಿಸಿದ ವ್ಯಕ್ತಿಯ ಚಿತ್ರವನ್ನು ವಿಧಾನ ಪರಿಷತ್ತಿನಲ್ಲಿ ಹಾಕಿರುವುದು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನವಾಗಿದೆ. ಸ್ವಾತಂತ್ರ್ಯ ಹೋರಾಟಗಾರರು ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ’ ಎಂದು ದೀಪಕ್ ಸಿಂಗ್ ತಿಳಿಸಿದರು.
‘ಕ್ವಿಟ್ ಇಂಡಿಯಾ ಚಳವಳಿ’ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ವಿರೋಧಿಸಿದ ಸಾವರ್ಕರ್ ಭಾವ ಚಿತ್ರವನ್ನು ಹಾಕಲು ಯಾವುದೇ ದೇಶಭಕ್ತರು ಒಪ್ಪಿಕೊಳ್ಳುವುದಿಲ್ಲ’ ಎಂದು ದೀಪಕ್ ಸಿಂಗ್ ಪತ್ರದಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ವಿವರಣೆ ನೀಡುವಂತೆ ವಿಧಾನ ಪರಿಷತ್ ಸಭಾಪತಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
‘ಸಾವರ್ಕರ್ ಹೆಸರಿನ ಸುತ್ತಲೂ ವಾದ–ವಿವಾದಗಳಿವೆ. ಅಲ್ಲದೆ ಸಾವರ್ಕರ್, ಜೈಲಿನಿಂದ ಹೊರ ಬರಲು ಬ್ರಿಟಿಷರಲ್ಲಿ ಕ್ಷಮೆಯಾಚಿಸಿದ್ದರು’ ಎಂದು ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ದೂರಿದ್ದಾರೆ.
ಈ ಆರೋಪಗಳನ್ನು ತಳ್ಳಿ ಹಾಕಿರುವ ಬಿಜೆಪಿ ನಾಯಕ ವಿಜಯ್ ಬಹದ್ದೂರ್ ಪಠಾಕ್ ಅವರು ‘ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಮತ್ತು ಅವರು ಜನರಿಗೆ ಸದಾ ಸ್ಫೂರ್ತಿಯಾಗಿರುತ್ತಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.