ನವದೆಹಲಿ: ಗಾಜಾದಲ್ಲಿ ಕದನ ವಿರಾಮ ಘೋಷಣೆಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯದ ಕುರಿತ ಮತದಾನದಿಂದ ದೂರ ಉಳಿದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಶನಿವಾರ ವಾಗ್ದಾಳಿ ನಡೆಸಿದೆ. ಭಾರತದ ವಿದೇಶಾಂಗ ನೀತಿಯು ಅಧಃಪತನ ಹೊಂದುತ್ತಿದೆ ಎಂದು ಅದು ಆರೋಪಿಸಿದೆ.
ಯುದ್ಧ, ಜನಾಂಗೀಯ ಹತ್ಯೆ ವಿರುದ್ಧದ ಮತ್ತು ನ್ಯಾಯದ ಪರವಾದ ತನ್ನ ತಾತ್ವಿಕ ನಿಲುವುಗಳನ್ನ ಭಾರತವು ಕೈಬಿಟ್ಟಿದೆಯೇ? ಈ ಬಗ್ಗೆ ಸರ್ಕಾರ ಉತ್ತರ ನೀಡಬೇಕು ಎಂದು ಪಕ್ಷವು ಆಗ್ರಹಿಸಿದೆ.
‘ಭಾರತದ ವಿದೇಶಾಂಗ ನೀತಿಯು ದಿನದಿಂದ ದಿನಕ್ಕೆ ಅಧಃಪತನದ ಹಾದಿಯಲ್ಲಿದೆ. ಆದ್ದರಿಂದ, ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಾಂಗ ಸಚಿವರನ್ನು ಕರೆದು, ಅವರನ್ನು ಹೊಣೆಗಾರರನ್ನಾಗಿಸಬೇಕು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಒತ್ತಾಯಿಸಿದ್ದಾರೆ.
‘ಗಾಜಾದಲ್ಲಿ ಕದನವಿರಾಮ ಘೋಷಿಸುವ ವಿಶ್ವಸಂಸ್ಥೆಯ ನಿರ್ಣಯದ ಪರವಾಗಿ 149 ರಾಷ್ಟ್ರಗಳು ಮತ್ತು ನಿರ್ಣಯದ ವಿರುದ್ಧ 12 ದೇಶಗಳು ಸಹಿ ಮಾಡಿವೆ. ಮತದಾನದಿಂದ ಹೊರಗುಳಿದ 19 ರಾಷ್ಟ್ರಗಳ ಪೈಕಿ ಭಾರತವೂ ಒಂದು’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.