ಭಾರತ-ಚೀನಾ ದ್ವಿಪಕ್ಷೀಯ ಮಾತುಕತೆ
(ಪಿಟಿಐ ಚಿತ್ರ)
ನವದೆಹಲಿ: ಭಯೋತ್ಪಾದನೆ ವಿಚಾರವಾಗಿ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರೊಂದಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮಾತುಕತೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಈ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದು, 'ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಂದರ್ಭದಲ್ಲಿ ಪಾಕಿಸ್ತಾನ-ಚೀನಾ ನಡುವಣ ಸಹಕಾರದ ಬಗ್ಗೆ ಪ್ರಧಾನಿ ಏಕೆ ಮೌನ ಏಕೆ ವಹಿಸಿದ್ದಾರೆ' ಎಂದು ಪ್ರಶ್ನಿಸಿದ್ದಾರೆ.
'ಭಯೋತ್ಪಾದನೆ ಬಗ್ಗೆ ಚೀನಾದ ದ್ವಂದ ನೀತಿ, ದ್ವಂದ ನಿಲುವುಗಳನ್ನು ಭಾರತ ಆರೋಪಿಸುತ್ತಲೇ ಬಂದಿದೆ. ಆದರೆ ಈಗ ಪ್ರಧಾನಿ ಮೋದಿ, ಭಾರತ ಹಾಗೂ ಚೀನಾ ಭಯೋತ್ಪಾದನೆಯ ಬಲಿಪಶುಗಳೆಂದು ಹೇಳುತ್ತಾರೆ. ಇದು ಡ್ರ್ಯಾಗನ್ ಎಂದು ಕರೆಯಲ್ಪಡುವುದರ ಎದುರು ಆನೆಯ ಶರಣಾಗತಿ ಅಲ್ಲದಿದ್ದರೆ ಇನ್ನೇನು' ಎಂದು ಪ್ರಶ್ನಿಸಿದ್ದಾರೆ.
'56 ಇಂಚಿನ ಎದೆಯ ಸ್ವಯಂ ಘೋಷಿತ ನಾಯಕನ ಬಣ್ಣ ಈಗ ಬಯಲಾಗಿದೆ. 2020ರ ಜೂನ್ 19ಕ್ಕೆ ಚೀನಾಕ್ಕೆ ಕ್ಲೀನ್ ಚಿಟ್ ಮಾಡುವ ಮೂಲಕ ದೇಶದ್ರೋಹ ಎಸಗಲಾಗಿತ್ತು. ಈಗ 2025ರ ಆಗಸ್ಟ್ 31ರಂದು ಹೇಡಿತನದ ಮೂಲಕ ಮಂಡಿಯೂರಿದ ದಿನವೆಂದು ನೆನಪಿಸಿಕೊಳ್ಳಲಾಗುವುದು' ಎಂದು ಹೇಳಿದ್ದಾರೆ.
'ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಂದರ್ಭದಲ್ಲಿ ಪಾಕಿಸ್ತಾನ-ಚೀನಾ ನಡುವಣ ಜುಗಲ್ಬಂಧಿ ಕುರಿತು ಪ್ರಧಾನಿ ಮೋದಿ ಒಂದೇ ಒಂದು ಮಾತನ್ನು ಆಡಿಲ್ಲ' ಎಂದು ಅವರು ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.