ನವದೆಹಲಿ: ಬೆಲೆ ಏರಿಕೆ ಹಾಗೂ ಹಣದುಬ್ಬರ ವಿರುದ್ಧ ನ. 14 ರಿಂದ 15 ದಿನಗಳ ಕಾಲ ಪಕ್ಷದ ವತಿಯಿಂದ ದೇಶದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಬುಧವಾರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಲೆ ಏರಿಕೆಯಿಂದ ಜನರು ಜೀವನ ನಡೆಸುವುದೇ ಕಷ್ಟವಾಗಿದೆ. ಆರ್ಥಿಕ ಸ್ಥಿತಿ ಹದಗೆಟ್ಟಿರುವುದು, ನಿರುದ್ಯೋಗ ಪ್ರಮಾಣದಲ್ಲಿ ಹೆಚ್ಚಳ, ಕೃಷಿ ಕ್ಷೇತ್ರ ಎದುರಿಸುತ್ತಿರುವ ಬಿಕ್ಕಟ್ಟಿನಿಂದಾಗಿ ಜನರು ಮತ್ತಷ್ಟು ಸಂಕಷ್ಟ ಎದುರಿಸುವಂತಾಗಿದೆ‘ ಎಂದರು.
‘ಸಾಸಿವೆ ಎಣ್ಣೆ ಸೇರಿದಂತೆ ಇತರ ಎಲ್ಲ ಖಾದ್ಯತೈಲಗಳ ಬೆಲೆಗಳು ಕಳೆದ ಒಂದು ವರ್ಷದ ಅವಧಿಯಲ್ಲಿ ದ್ವಿಗುಣಗೊಂಡಿವೆ. ತರಕಾರಿಗಳ ಬೆಲೆಗಳಲ್ಲಿ ತಿಂಗಳ ಅವಧಿಯಲ್ಲಿ ಶೇ 40–50ರಷ್ಟು ಏರಿಕೆಯಾಗಿದೆ’ ಎಂದು ದೂರಿದರು.
‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅತ್ಯಂತ ದುಬಾರಿ ಆಡಳಿತ ಎಂಬುದು ಸಾಬೀತಾಗಿದೆ’ ಎಂದು ಪಕ್ಷದ ಮತ್ತೊಬ್ಬ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಟೀಕಿಸಿದರು.
‘ಈ ಪ್ರತಿಭಟನೆಯನ್ನು ‘ಜನ ಜಾಗರಣ ಅಭಿಯಾನ‘ ಎಂದು ಕರೆಯಲಾಗುತ್ತಿದ್ದು, ಬೆಲೆ ಏರಿಕೆ ವಿರುದ್ಧದ ಜನರ ಆಕ್ರೋಶಕ್ಕೆ ಪಕ್ಷವು ಈ ಮೂಲಕ ದನಿಯಾಗಲಿದೆ. ಸಿಎನ್ಜಿ, ಅಡುಗೆ ಅನಿಲ, ಡೀಸೆಲ್, ಪೆಟ್ರೋಲ್, ಖಾದ್ಯ ತೈಲ, ಬೇಳೆ ಕಾಳುಗಳು ಹಾಗೂ ಇತರ ಅಗತ್ಯ ವಸ್ತುಗಳ ಬೆಲೆಗಳ ಹೆಚ್ಚಳದ ವಿರುದ್ಧ ಜನರ ಸಂಘಟನೆಯನ್ನು ಗಟ್ಟಿಗೊಳಿಸಲಾಗುವುದು’ ಎಂದು ಹಿರಿಯ ಮುಖಂಡ ದಿಗ್ವಿಜಯ ಸಿಂಗ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.