ಗುವಾಹಟಿ: ಕಾನ್ರಾಡ್ ಕೆ.ಸಂಗ್ಮಾ ಹಾಗೂ ಮಾಣಿಕ್ ಸಹಾ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಶುಕ್ರವಾರ ರಾಜ್ಯಪಾಲರನ್ನು ಭೇಟಿಯಾಗಿ ಕ್ರಮವಾಗಿ ಮೇಘಾಲಯ ಹಾಗೂ ತ್ರಿಪುರಾದಲ್ಲಿ ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ನಾಗಾಲ್ಯಾಂಡ್ನಲ್ಲೂ ಸರ್ಕಾರ ರಚನೆಯ ಪ್ರಕ್ರಿಯೆ ಬಿರುಸುಗೊಂಡಿದ್ದು, ಎನ್ಡಿಪಿಪಿಯ ನೂತನ ಶಾಸಕರು ನೆಫ್ಯೂ ರಿಯೊ ಅವರನ್ನು ತಮ್ಮ ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ.
ಮೇಘಾಲಯದಲ್ಲಿ ಸಂಗ್ಮಾ ನೇತೃತ್ವದ ಎನ್ಪಿಪಿ (ನ್ಯಾಷನಲಿಸ್ಟ್ ಪೀಪಲ್ಸ್ ಪಾರ್ಟಿ) ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಪಕ್ಷವು ಒಟ್ಟು 26 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಬಹುಮತಕ್ಕೆ 32 ಸ್ಥಾನಗಳ ಅಗತ್ಯವಿದ್ದು, ಬಿಜೆಪಿ, ಎಚ್ಎಸ್ಪಿಡಿಪಿಯ ತಲಾ ಇಬ್ಬರು ಹಾಗೂ ಇಬ್ಬರು ಪಕ್ಷೇತರ ಶಾಸಕರು ಬೆಂಬಲ ಪ್ರಕಟಿಸಿರುವುದರಿಂದ ಈ ಪಕ್ಷದ ಸರ್ಕಾರ ರಚನೆಯ ಹಾದಿ ಸುಗಮಗೊಂಡಿದೆ.
ಚುನಾವಣೆ ವೇಳೆ ಬಿಜೆಪಿ ಮೇಘಾಲಯ ಘಟಕವು ಸಂಗ್ಮಾ ವಿರುದ್ಧ ಭಷ್ಟಾಚಾರದ ಆರೋಪಗಳನ್ನು ಮಾಡಿತ್ತು. ಚುನಾವಣಾ ಪ್ರಚಾರ ರ್ಯಾಲಿಗಳಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರೂ ಎನ್ಪಿಪಿ ವಿರುದ್ಧ ಭ್ರಷ್ಟಾಚಾರದ ಟೀಕಾಸ್ತ್ರ ಪ್ರಯೋಗಿಸಿದ್ದರು. ಹೀಗಿದ್ದರೂ ಪಕ್ಷವು ಎನ್ಪಿಪಿಗೆ ಬೆಂಬಲ ಘೋಷಿಸಿದೆ.
ಇದೇ 7ರಂದು ಶಿಲ್ಲಾಂಗ್ನಲ್ಲಿ ನಡೆಯುವ ಸಮಾರಂಭದಲ್ಲಿ ಸಂಗ್ಮಾ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮೋದಿ ಹಾಗೂ ಶಾ ಅವರು ಈ ಸಮಾರಂಭದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಮಾಣಿಕ್ ಸಹಾ ಅವರು ಇದೇ 8ರಂದು ತ್ರಿಪುರಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆ ಇದೆ. ರಿಯೊ ಅವರು ಐದನೇ ಬಾರಿ ನಾಗಾಲ್ಯಾಂಡ್ ಮುಖ್ಯಮಂತ್ರಿ ಗಾದಿಗೆ ಏರುವುದು ನಿಚ್ಚಳವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.