ADVERTISEMENT

ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಗೆ ವರವಾಗಲಿದೆ ರಾಮಮಂದಿರ: ಸಮೀಕ್ಷೆ

ಐಎಎನ್ಎಸ್
Published 13 ನವೆಂಬರ್ 2021, 6:03 IST
Last Updated 13 ನವೆಂಬರ್ 2021, 6:03 IST
ರಾಮ ಮಂದಿರದ ಪ್ರತಿಕೃತಿ
ರಾಮ ಮಂದಿರದ ಪ್ರತಿಕೃತಿ    

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಾಣ ಮಾಡುತ್ತಿರುವುದು ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ವರವಾಗಿ ಪರಣಮಿಸಲಿದೆ ಎಂದು ಎಬಿಪಿ, ಸಿ–ವೋಟರ್‌, ಐಎಎನ್‌ಎಸ್‌ ನಡೆಸಿದ ಸಮೀಕ್ಷೆಯಲ್ಲಿ ಗೊತ್ತಾಗಿದೆ.

ಉತ್ತರ ಪ್ರದೇಶ, ಪಂಜಾಬ್‌ ಸೇರಿದಂತೆ ಮುಂದಿನ ವರ್ಷ ವಿಧಾನಸಭಾ ಚುನಾವಣೆಗಳನ್ನು ಎದುರಿಸಲಿರುವ ಐದು ರಾಜ್ಯಗಳಲ್ಲಿ ಎಬಿಪಿ, ಸಿ ವೋಟರ್‌, ಐಎಎನ್‌ಎಸ್‌ ಸಮೀಕ್ಷೆ ನಡೆಸಿದೆ.

ಶೇ 63.3ರಷ್ಟು ಮತದಾರರು ರಾಮಮಂದಿರ ನಿರ್ಮಾಣವು ಬಿಜೆಪಿಗೆ ಸಹಾಯ ಮಾಡುತ್ತದೆ ಎಂದು ಭಾವಿಸಿದರೆ, ಶೇ 39.7 ಜನರು ಇದು ನೆರವಿಗೆ ಬರುವುದಿಲ್ಲ ಎಂದು ಹೇಳಿದ್ದಾರೆ.

ADVERTISEMENT

ಉತ್ತರ ಪ್ರದೇಶದಲ್ಲಿ 2019ರ ಸಂಸತ್‌ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ್ದ 76.1 ಪ್ರತಿಶತ ಮತದಾರರು, ಕಾಂಗ್ರೆಸ್‌ಗೆ ಮತ ಚಲಾಯಿಸಿದ ಶೇ 61 ಮಂದಿ, ಸಮಾಜವಾದಿ ಪಕ್ಷಕ್ಕೆ (ಎಸ್‌ಪಿ) ಮತ ಚಲಾಯಿಸಿದ ಶೇ 39.3 ಮತ್ತು ಬಿಎಸ್‌ಪಿಗೆ ಮತ ಹಾಕಿದ ಶೇ 38.2 ಮಂದಿ ಅಯೋಧ್ಯೆ ರಾಮಮಂದಿರವು 2022ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಹಾಯ ಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

2019 ರ ಸಂಸತ್‌ ಚುನಾವಣೆಯಲ್ಲಿ ಬಿಜೆಪಿಗೆ ಮತ ಚಲಾಯಿಸಿದ ಶೇ 71.1 ರಷ್ಟು ಮತದಾರರು ಯೋಗಿ ಆದಿತ್ಯನಾಥ್ ಅವರು ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದು ಬಯಸಿದ್ದಾರೆ. ಕಾಂಗ್ರೆಸ್‌ಗೆ ಮತ ಹಾಕಿದವರ ಪೈಕಿ ಶೇ. 48.2 ರಷ್ಟು ಜನರು ಯೋಗಿ ಮರಳಬೇಕು ಎಂದಿದ್ದಾರೆ!

ರಾಜ್ಯದ ಒಟ್ಟು ಶೇ 47.2ರಷ್ಟು ಮತದಾರರು ಯೋಗಿ ಆದಿತ್ಯನಾಥ್‌ ಅವರ ಅಧಿಕಾರಾವಧಿ ಉತ್ತಮವಾಗಿದೆ ಎಂದು ಹೇಳಿದರೆ, ಶೇ 45.2ರಷ್ಟು ಜನ ಅಖಿಲೇಶ್ ಯಾದವ್ ಅವರ ಅಧಿಕಾರಾವಧಿ ಚೆನ್ನಾಗಿತ್ತು ಎಂದಿದ್ದಾರೆ.

ಮುಂಬರುವ ಚುನಾವಣೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ದೊಡ್ಡ ಮಟ್ಟದ ಪರಿಣಾಮ ಬೀರಲಿದೆ. ನಂತರ, ನಿರುದ್ಯೋಗದ ಬಗ್ಗೆ ಶೇ 16.7 ಮಂದಿ ಮಾತನಾಡಿದ್ದಾರೆ. ಹಣದುಬ್ಬರ (ಶೇ 14.7), ರೈತರ ಪ್ರತಿಭಟನೆ (ಶೇ 15.3), ರಾಮಮಂದಿರದ ಬಗ್ಗೆ ಶೇ 14.1 ಮಂದಿ ಪ್ರಸ್ತಾಪಿಸಿದ್ದಾರೆ.

ರಾಜ್ಯದ ಎಲ್ಲಾ 403 ವಿಧಾನಸಭಾ ಕ್ಷೇತ್ರಗಳಲ್ಲಿ 3,571 ಮಂದಿಯನ್ನು ಸಮೀಕ್ಷೆಗಾಗಿ ಸಂಪರ್ಕಿಸಲಾಗಿದೆ ಎಂದು ಸರ್ವೇ ಸಂಸ್ಥೆಗಳಾದ ಎಬಿಪಿ, ಸಿ–ವೋಟರ್‌, ಐಎಎನ್‌ಎಸ್‌ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.