ADVERTISEMENT

ದೇಶದ ಯುವ ಜನರು ಕೋಪಗೊಂಡಿದ್ದಾರೆ, ತಕ್ಷಣ ಅಗ್ನಿಪಥ ಯೋಜನೆ ಹಿಂಪಡೆಯಬೇಕು- ಎಎಪಿ

ಪಿಟಿಐ
Published 17 ಜೂನ್ 2022, 15:24 IST
Last Updated 17 ಜೂನ್ 2022, 15:24 IST
ಬಿಹಾರದ ದಾನಾಪುರದಲ್ಲಿ ಯುವಕರಿಂದ ಪ್ರತಿಭಟನೆ (ಪಿಟಿಐ ಚಿತ್ರ)
ಬಿಹಾರದ ದಾನಾಪುರದಲ್ಲಿ ಯುವಕರಿಂದ ಪ್ರತಿಭಟನೆ (ಪಿಟಿಐ ಚಿತ್ರ)   

ನವದೆಹಲಿ: ದೇಶದ ಯುವ ಜನ ಕೋಪಗೊಂಡಿದ್ದಾರೆ, ತಕ್ಷಣ ಅಗ್ನಿಪಥ ಯೋಜನೆಯನ್ನು ಹಿಂಪಡೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಮ್‌ ಆದ್ಮಿ ಪಾರ್ಟಿ ಒತ್ತಾಯಿಸಿದೆ.

ಯುವ ಜನತೆಯ ಕ್ರೋಧದಿಂದ ದೇಶವನ್ನು ಕಾಪಾಡುವ ದೃಷ್ಟಿಯಿಂದ ನೂತನ ಸೇನಾ ನೇಮಕಾತಿ ಯೋಜನೆಯನ್ನು ವಾಪಸ್‌ ಪಡೆಯಬೇಕು ಎಂದು ಶುಕ್ರವಾರ ಎಎಪಿ ಒತ್ತಾಯಿಸಿದೆ.

ಅಗ್ನಿಪಥ ಯೋಜನೆ ವಿರೋಧಿಸಿ ರಾಷ್ಟ್ರದೆಲ್ಲೆಡೆ ನಡೆಯುತ್ತಿರುವ ಪ್ರತಿಭಟನೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ಎಎಪಿ ಪಕ್ಷ ಬೆಂಬಲವನ್ನು ಘೋಷಿಸಿದೆ. ಹಿಂಸಾಚಾರಕ್ಕಿಳಿಯದೆ, ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಹಾನಿಗೊಳಿಸದೆ, ಪ್ರಜಾಪ್ರಭುತ್ವದ ಮಾರ್ಗದಲ್ಲಿ ಪ್ರತಿಭಟನೆಯನ್ನು ಮಾಡುವಂತೆ ಕರೆ ನೀಡಿದೆ.

ADVERTISEMENT

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಎಪಿ ರಾಜ್ಯಸಭಾ ಸದಸ್ಯ ಮತ್ತು ಪಕ್ಷದ ವಕ್ತಾರ ಸಂಜಯ್‌ ಸಿಂಗ್‌, ಖಾಸಗಿ ಕಂಪನಿಗಳಿಗೆ ತರಬೇತಿ ಪಡೆದ ಭದ್ರತಾ ಸಿಬ್ಬಂದಿಗೆ ಬೇಡಿಕೆಯಿದ್ದು, ಅದನ್ನು ಪೂರೈಸಲು ಪ್ರಧಾನಿ ನರೇಂದ್ರ ಮೋದಿ ನೂತನ ಸೇನಾ ನೇಮಕಾತಿ ಯೋಜನೆಯನ್ನು ತಂದಿದ್ದಾರೆ ಎಂದು ಆರೋಪಿಸಿದರು.

'ಅಗ್ನಿಪಥ ಯೋಜನೆಯಡಿ ನೇಮಕಗೊಂಡವರನ್ನು ನಾಲ್ಕು ವರ್ಷಗಳ ಬಳಿಕ ಕೈಬಿಡಲಾಗುತ್ತದೆ. ನಂತರ ಅವರಿಗೆ ಪಿಂಚಣಿ ಸೇರಿದಂತೆ ಯಾವ ಸೌಲಭ್ಯವೂ ಸಿಗುವುದಿಲ್ಲ. ನರೇಂದ್ರ ಮೋದಿ ಅವರು ಈ ಯೋಜನೆಯನ್ನು ತಂದಿರುವುದು ಖಾಸಗಿ ಕಂಪನಿಗಳ ಲಾಭಕ್ಕಾಗಿ. ಸೇನೆಯನ್ನು ತನ್ನ ಖಾಸಗಿ ಏಜೆನ್ಸಿಯನ್ನಾಗಿ ಮಾಡಿಕೊಳ್ಳಲು ಬಯಸಿದ್ದಾರೆ. ಖಾಸಗಿ ಕಂಪನಿಗಳ ಭದ್ರತಾ ಸಿಬ್ಬಂದಿಯ ತರಬೇತಿ ಕೇಂದ್ರವನ್ನಾಗಿಸುತ್ತಿದ್ದಾರೆ' ಎಂದು ಸಿಂಗ್‌ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.