ಪ್ರಧಾನಿ ನರೇಂದ್ರ ಮೋದಿ ಹಾಗೂ ಎಂ.ಎ ಬೇಬಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಆರ್ಎಸ್ಎಸ್ ಅನ್ನು ಹೊಗಳಿದ್ದು ಮತ್ತು ಅದನ್ನು ಐತಿಹಾಸಿಕ ದಾಖಲೆ ಹೊಂದಿರುವ ಸಂಸ್ಥೆ ಎಂದು ಕರೆದಿರುವುದನ್ನು ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಖಂಡಿಸಿದೆ. ಪ್ರಧಾನಿ ಹೇಳಿಕೆ ತೀವ್ರ ವಿಷಾದಕರ ಎಂದು ಹೇಳಿದೆ.
‘ಮಹಾತ್ಮ ಗಾಂಧಿಯವರ ಹತ್ಯೆಯ ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್ಎಸ್ಎಸ್) ನಿಷೇಧಿಸಲಾಯಿತು. ಕೋಮು ಗಲಭೆಗಳನ್ನು ಪ್ರಚೋದಿಸುವಲ್ಲಿ ಆರ್ಎಸ್ಎಸ್ನ ಪಾತ್ರವನ್ನು ಇತಿಹಾಸಕಾರರು ದಾಖಲಿಸಿದ್ದಾರೆ’ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ ಬೇಬಿ ಸ್ವಾತಂತ್ರ್ಯೋತ್ಸವದ ಶುಭಾಶಯ ಸಂದೇಶದಲ್ಲಿ ಹೇಳಿದ್ದಾರೆ.
‘ವಸಾಹತುಶಾಹಿ ಆಳ್ವಿಕೆಯಿಂದ ಸ್ವಾತಂತ್ರ್ಯದತ್ತ ಭಾರತದ ಪ್ರಯಾಣ ದೀರ್ಘ ಮತ್ತು ಕಷ್ಟಕರವಾಗಿತ್ತು. ಶಹೀದ್ ಭಗತ್ ಸಿಂಗ್ ಮತ್ತು ಅಶ್ಫಾಕುಲ್ಲಾ ಖಾನ್ ಅವರಂತಹ ಹುತಾತ್ಮರು ಇಂದು ಮಾತ್ರವಲ್ಲ, ಪ್ರತಿದಿನವೂ ನಮ್ಮ ನೆನಪಿನಲ್ಲಿ ಇರುತ್ತಾರೆ’ ಎಂದು ಬೇಬಿ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
‘ಮಹಾತ್ಮ ಗಾಂಧಿಯವರಿಂದ ಸುಭಾಷ್ ಚಂದ್ರ ಬೋಸ್ ವರೆಗೆ, ಮೌಲಾನಾ ಅಬುಲ್ ಕಲಾಂ ಆಜಾದ್ ಅವರಿಂದ ಕಾಮ್. ಪಿ. ಕೃಷ್ಣ ಪಿಳ್ಳೈ, ಇಎಂಎಸ್, ಎಕೆಜಿ, ಅಕ್ಕಮ್ಮ ಚೆರಿಯನ್ - ಮತ್ತು ಅಸಂಖ್ಯಾತರು ನಡೆಸಿದ ನಿಸ್ವಾರ್ಥ ಹೋರಾಟಗಳು ನಮ್ಮ ಸ್ವಾತಂತ್ರ್ಯದ ಅಡಿಪಾಯವನ್ನು ರೂಪಿಸುತ್ತವೆ"’ಎಂದು ಅವರು ಹೇಳಿದ್ದಾರೆ.
ಆರ್ಎಸ್ಎಸ್ ಅನ್ನು ಹೊಗಳುವ ಮೂಲಕ, ಪ್ರಧಾನಿ ಹುತಾತ್ಮರ ಸ್ಮರಣೆಯನ್ನು ಅವಮಾನಿಸಿದ್ದಾರೆ. ಇದು ಸ್ವೀಕಾರಾರ್ಹವಲ್ಲ. ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ಕೆಂಪು ಕೋಟೆಯ ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ, ಸಂಶಯಾಸ್ಪದ ಐತಿಹಾಸಿಕ ದಾಖಲೆಯನ್ನು ಹೊಂದಿರುವ ಆರ್ಎಸ್ಎಸ್ ಅನ್ನು ಹೊಗಳಲು ಆಯ್ಕೆ ಮಾಡಿಕೊಂಡಿರುವುದು ತೀವ್ರ ವಿಷಾದಕರ. ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ಪಾತ್ರವನ್ನು ಹೊಂದಿರದ ಮತ್ತು ಧಾರ್ಮಿಕ ಆಧಾರದ ಮೇಲೆ ರಾಷ್ಟ್ರೀಯ ಏಕತೆಯನ್ನು ದುರ್ಬಲಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಿರುವ ಸಂಘಟನೆ ಇದು ಎಂದು ಬೇಬಿ ಕಿಡಿಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.