ಮುಂಬೈ: ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರನ್ನು ಪ್ರಶಂಸಿಸಿದ ಸಿಪಿಐ(ಎಂ) ಮಾಜಿ ಶಾಸಕರೊಬ್ಬರನ್ನು ಪಕ್ಷದ ಕೇಂದ್ರ ಸಮಿತಿಯಿಂದ ಉಚ್ಚಾಟಿಸಲಾಗಿದೆ.
ಸಿಪಿಐ(ಎಂ)ನ ಮಾಜಿ ಶಾಸಕ ನರಸಯ್ಯ ಎಡಂ ಉಚ್ಚಾಟನೆಗೊಂಡವರು. ತಾವು ಶಾಸಕರಾಗಿದ್ದ ಅವಧಿ ವೇಳೆ ನಿರ್ಮಿಸಲು ಉದ್ದೇಶಿಸಿದ್ದಸೋಲಾಪುರ್ ಜಿಲ್ಲೆಯ ವಸತಿ ಯೋಜನೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಅತ್ಯಂತ ಕ್ಷಿಪ್ರಗತಿಯಲ್ಲಿ ಅನುಮೋದನೆ ನೀಡಿದ್ದರು. ಇದಕ್ಕಾಗಿ ಮೋದಿ, ಫಡಣವೀಸ್ ಅವರಿಗೆ ಧನ್ಯವಾದ ಸಲ್ಲಿಸಿದ್ದ ಅವರು, ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಹಾರೈಸಿದ್ದರು.
’ಈ ರೀತಿ ಪ್ರಶಂಸೆ ವ್ಯಕ್ತಪಡಿಸುವುದು ಸಿಪಿಎಂನ ನೀತಿಗೆ ವಿರುದ್ಧವಾದುದು. ಈ ಕಾರಣದಿಂದ ಪಕ್ಷದ ಕೇಂದ್ರ ಸಮಿತಿಯಿಂದ ಮೂರು ತಿಂಗಳು ಅಮಾನತುಗೊಳಿಸಿ, ನಿರ್ಧಾರ ತೆಗೆದುಕೊಳ್ಳಲಾಗಿದೆ‘ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.
ಕೇಂದ್ರ ಸಮಿತಿಯು ಕಮ್ಯುನಿಷ್ಟ್ ಪಕ್ಷದ ನಿರ್ಧಾರ ತೆಗೆದುಕೊಳ್ಳುವ ಅತ್ಯುನ್ನತ ಸಮಿತಿಯಾಗಿದೆ.
ಈ ಬಗ್ಗೆ ನರಸಯ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.