ADVERTISEMENT

ಆಜಂ ಖಾನ್ ಆಕ್ಷೇಪಾರ್ಹ ಹೇಳಿಕೆ ವಿರುದ್ಧ ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 26 ಜುಲೈ 2019, 11:05 IST
Last Updated 26 ಜುಲೈ 2019, 11:05 IST
   

ನವದೆಹಲಿ: ಲೋಕಸಭೆಯಲ್ಲಿ ಗುರುವಾರ ತ್ರಿವಳಿ ತಲಾಕ್‌ ಕುರಿತ ಚರ್ಚೆಯ ವೇಳೆ ಸಮಾಜವಾದಿ ಪಕ್ಷದ ಸಂಸದ ಆಜಂ ಖಾನ್ ಅವರು ಬಿಜೆಪಿ ಸಂಸದೆ ರಮಾ ದೇವಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದು, ಸದನದಲ್ಲಿ ಭಾರಿ ಗದ್ದಲಕ್ಕೆ ಕಾರಣವಾಗಿತ್ತು.

ಈ ಬಗ್ಗೆ ಶುಕ್ರವಾರ ಸದನದಲ್ಲಿ ಆಕ್ಷೇಪ ವ್ಯಕ್ತ ಪಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಅದೊಂದು ಅಸಹನೀಯ ಕೃತ್ಯ. ಆಜಂ ಖಾನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಲೋಕಸಭಾ ಸ್ಪೀಕರ್ಓಂ ಪ್ರಕಾಶ್ ಬಿರ್ಲಾ ಅವರಲ್ಲಿ ಒತ್ತಾಯಿಸಿದ್ದಾರೆ.

ಆಜಂಖಾನ್ ಹೇಳಿಕೆ ವಿರುದ್ಧ ಲೋಕಸಭೆಯಲ್ಲಿ ಭಾರೀ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಪ್ರತಿಕ್ರಿಯಿಸಿದ ಸ್ಪೀಕರ್, ತಾನು ಎಲ್ಲ ಪಕ್ಷಗಳ ನಾಯಕರ ಸಭೆ ಕರೆದು ಆಮೇಲೆ ನಿರ್ಧಾರ ಕೈಗೊಳ್ಳುವೆ ಎಂದಿದ್ದಾರೆ.

ADVERTISEMENT

ತ್ರಿವಳಿ ತಲಾಕ್‌ ಕುರಿತ ಚರ್ಚೆ ವೇಳೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಆಜಂಖಾನ್ ವಿರುದ್ಧ ಸದನದಲ್ಲಿ ಆಕ್ಷೇಪ ವ್ಯಕ್ತವಾದಾಗ ನೀವು ನನ್ನ ಸಹೋದರಿ. ತುಂಬಾ ಮುದ್ದಿನ ಸಹೋದರಿ. ನಾನು ತುಂಬಾ ವರ್ಷಗಳಿಂದ ರಾಜಕೀಯದಲ್ಲಿದ್ದೇನೆ.ಕೆಟ್ಟದ್ದನ್ನು ಹೇಳಲು ನನ್ನಿಂದ ಸಾಧ್ಯವಿಲ್ಲ.ನಾನು ಹೇಳಿದ ಮಾತುಗಳಲ್ಲಿ ತಪ್ಪಾಗಿದ್ದರೆ ನಾನು ಸಂಸತ್ತಿನಲ್ಲಿ ರಾಜೀನಾಮೆ ನೀಡುತ್ತೇನೆ ಎಂದಿದ್ದರು.

ಇಲ್ಲಿರುವ ಎಲ್ಲ ಜನಪ್ರತಿನಿಧಿಗಳಿಗೂ ಇದು ಕಳಂಕ ತಂದಿದೆ.ನಾವಿಲ್ಲಿ ಮೂಕ ಪ್ರೇಕ್ಷಕರಾಗಿ ಕುಳಿತುಕೊಳ್ಳಲಾರೆವು.ಇದು ಆಕ್ಷೇಪಾರ್ಹ. ಎಂದು ನಾವು ದನಿಯೆತ್ತಬೇಕು ಎಂದು ಗಂಡಸೊಬ್ಬ ಬಂದು ಇಲ್ಲಿ ಯಾವುದಾದರೊಂದು ಮಹಿಳೆಯತ್ತ ನೋಡುವ ಸದನ ಅಲ್ಲ ಇದು ಎಂದು ಆಜಂಖಾನ್ ವಿರುದ್ಧ ಸ್ಮೃತಿ ಇರಾನಿ ಗುಡುಗಿದ್ದಾರೆ.

ಅದೇ ವೇಳೆ ಆಜಂ ಖಾನ್ ಕ್ಷಮೆಯಾಚಿಸದೇ ಇದ್ದರೆ ಅವರನ್ನು ಸದನದಿಂದ ವಜಾ ಮಾಡಬೇಕು ಎಂದು ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.ಇಂತಾ ಘಟನೆ ನೋವುಂಟುಮಾಡಿದೆ.ತುಂಬ ಗೌರವದಿಂದ ರಮಾ ದೇವಿ ಆ ಪರಿಸ್ಥಿತಿಯನ್ನು ನಿಭಾಯಿಸಿದರು.ಈ ಬಗ್ಗೆ ಯಾವುದೇ ರೀತಿಯ ರಾಜಿ ಮಾಡಿಕೊಳ್ಳದೆ ಕಠಿಣ ಶಿಕ್ಷೆ ನೀಡಬೇಕು ಎಂದು ರವಿಶಂಕರ್ ಪ್ರಸಾದ್ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.