ನವದೆಹಲಿ: ಪಶ್ಚಿಮ ಬಂಗಾಳ ಮತ್ತು ಒಡಿಶಾ ಭೂಪ್ರದೇಶದ ಮೇಲೆ ಅಂಫಾನ್ ಚಂಡಮಾರುತ ಉಂಟು ಮಾಡಬಹುದಾದ ಪರಿಣಾಮವನ್ನು ಎದುರಿಸಲು ರಾಜ್ಯ ಸರ್ಕಾರಗಳು ಸಿದ್ಧತೆ ನಡೆಸಿವೆ. ಕೇಂದ್ರದಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್ಡಿಆರ್ಎಫ್) ತಂಡಗಳನ್ನು ನಿಗದಿತ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.
ಒಡಿಶಾದಲ್ಲಿ ಬೀಡುಬಿಟ್ಟಿರುವ 15 ತಂಡ ಚಂಡಮಾರುತ ಕುರಿತು ಜಾಗೃತಿ ಮೂಡಿಸುವ ಹಾಗೂ ಜನರ ಸ್ಥಳಾಂತರ ನಡೆಸುವ ಕಾರ್ಯಗಳಲ್ಲಿ ತೊಡಗಿವೆ. ಪಶ್ಚಿಮ ಬಂಗಾಳದಲ್ಲಿ 19 ತಂಡಗಳು ಹಾಗೂ 2 ತಂಡಗಳನ್ನು ಸಜ್ಜಾಗಿ ಇರಿಸಲಾಗಿದೆ. 'ನಾವು ಈಗ ಕೋವಿಡ್–19 ಮತ್ತು ಚಂಡಮಾರುತ; ಎರಡು ಸವಾಲುಗಳನ್ನು ಎದುರಿಸುತ್ತಿದ್ದೇವೆ' ಎಂದು ಎನ್ಡಿಆರ್ಎಫ್ನ ಮುಖ್ಯಸ್ಥ ಎಸ್.ಎನ್.ಪ್ರಧಾನ್ ಹೇಳಿದ್ದಾರೆ.
ಬುಧವಾರ ಅಂಫಾನ್ ಚಂಡಮಾರುತ ಭೂಪ್ರದೇಶಗಳಿಗೆ ಅಪ್ಪಳಿಸಲಿದ್ದು, ಇದು ತೀವ್ರ ಸ್ವರೂಪದ ಚಂಡಮಾರುತವಾಗಿರುವುದರಿಂದ ಸೂಕ್ತ ರೀತಿಯ ಸಿದ್ಧತೆ ಕೈಗೊಳ್ಳಲಾಗಿದೆ.
ಪಶ್ಚಿಮ ಬಂಗಾಳದ ಮೂರು ಕರಾವಳಿ ಜಿಲ್ಲೆಗಳಿಂದ ಕನಿಷ್ಠ 3 ಲಕ್ಷ ಜನರನ್ನು ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾಹಿತಿ ನೀಡಿದ್ದಾರೆ.
ರಕ್ಷಣಾ ಕಾರ್ಯಗಳಿಗೆ ಹೆಚ್ಚುವರಿಯಾಗಿ ತಂಡ ಸಜ್ಜುಗೊಳಿಸಲಾಗಿದೆ. ಎನ್ಡಿಆರ್ಎಫ್ ಆರು ಕೇಂದ್ರಗಳನ್ನು ಗುರುತಿಸಲಾಗಿದೆ. ವರಾಣಸಿಯಲ್ಲಿರುವ 11 ಬೆಟಾಲಿಯನ್, ಪಟನಾದಲ್ಲಿ 9, ಗುವಾಹಟಿಯಲ್ಲಿ 1, ವಿಜಯವಾಡಾದಲ್ಲಿ 10, ಅರಕೋಣಂನಲ್ಲಿ 4 ಹಾಗೂ ಪುಣೆಯ 5 ಬೆಟಾಲಿಯಂ ಸಿದ್ಧವಿರಲಿವೆ. ಮಿಲಿಟರಿ ವಿಮಾನ ನಿಲ್ದಾಣಗಳನ್ನು ಹೊಂದಿರುವುದರಿಂದ ಅತ್ಯಂತ ಕಡಿಮೆ ಸಮಯದಲ್ಲಿ ತಂಡವನ್ನು ಅಗತ್ಯ ಸ್ಥಳಕ್ಕೆ ತಲುಪಿಸಬಹುದು ಎಂದು ಎಸ್.ಎನ್.ಪ್ರಧಾನ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.