ADVERTISEMENT

ದೆಹಲಿ ಮಾಲಿನ್ಯ: ಪ್ರಧಾನಿ ಮೋದಿಗೆ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಪತ್ರ

ಕೇಂದ್ರ ಸರ್ಕಾರದ ಮಧ್ಯಪ್ರವೇಶಕ್ಕೆ ಆಗ್ರಹ

ಏಜೆನ್ಸೀಸ್
Published 4 ನವೆಂಬರ್ 2019, 4:37 IST
Last Updated 4 ನವೆಂಬರ್ 2019, 4:37 IST
ದೆಹಲಿಯಲ್ಲಿ ದಟ್ಟ ‘ಹೊಂಜು’ (Smog)  ಆವರಿಸಿದ ವಾತಾವರಣ ಕಂಡುಬಂದಿದೆ
ದೆಹಲಿಯಲ್ಲಿ ದಟ್ಟ ‘ಹೊಂಜು’ (Smog) ಆವರಿಸಿದ ವಾತಾವರಣ ಕಂಡುಬಂದಿದೆ    

ಚಂಡೀಗಡ:ವಾಯುಮಾಲಿನ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕೃಷಿ ತ್ಯಾಜ್ಯ ನಿರ್ವಹಣೆಗೆ ಕೇಂದ್ರ ಸರ್ಕಾರ ರೈತರಿಗೆ ಪರಿಹಾರ ನೀಡುವುದೊಂದೇ ಸದ್ಯದ ಮಾರ್ಗ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿನ್ನೆ ಪತ್ರ ಬರೆದಿದ್ದೇನೆ. ಸೆಪ್ಟೆಂಬರ್ 25ರಂದೂ ಪತ್ರ ಬರೆದಿದ್ದೆ ಎಂದು ಅವರು ಭಾನುವಾರ ಟ್ವೀಟ್ ಮಾಡಿದ್ದಾರೆ.

ಮಾಲಿನ್ಯ ನಿಯಂತ್ರಣ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು. ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ಒಮ್ಮತ ಮೂಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ದೆಹಲಿ ಹಾಗೂ ಅದರ ಉಪನಗರಗಳಲ್ಲಿ ವಾಯುಮಾಲಿನ್ಯದ ಪ್ರಮಾಣ ಭಾನುವಾರ ಗಂಭೀರ ಸ್ಥಿತಿಗೆ ತಲುಪಿತ್ತು. ಸಮಸ್ಯೆಗೆಕೃಷಿ ತ್ಯಾಜ್ಯ ಸುಡುತ್ತಿರುವುದೇ ಪ್ರಮುಖ ಕಾರಣ ಎನ್ನಲಾಗಿದೆ. ಪಕ್ಕದ ರಾಜ್ಯಗಳಿಂದಲೇ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗಿದೆ. ಪಂಜಾಬ್ ಮತ್ತು ಹರಿಯಾಣಗಳಲ್ಲಿ ಕೃಷಿ ತ್ಯಾಜ್ಯ ಸುಡುವುದರಿಂದಾಗಿ ರಾಜ್ಯದಲ್ಲಿ ವಾಯುಮಾಲಿನ್ಯ ಹೆಚ್ಚಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೆಲ ದಿನಗಳ ಹಿಂದೆ ಆರೋಪಿಸಿದ್ದರು.

ತಾಜ್‌ಮಹಲ್‌ನಲ್ಲಿ ಗಾಳಿ ಶುದ್ಧೀಕರಣ ಯಂತ್ರ

ವಾಯುಮಾಲಿನ್ಯದಿಂದ ಆಗಬಹುದಾದ ಹಾನಿ ತಪ್ಪಿಸಲು ಐತಿಹಾಸಿಕ ಸ್ಮಾರಕ ತಾಜ್ ಮಹಲ್ ಆವರಣದಲ್ಲಿ ಗಾಳಿ ಶುದ್ಧೀಕರಣ ಯಂತ್ರವನ್ನು (ಏರ್ ಪ್ಯೂರಿಫಯರ್) ನಿಯೋಜಿಸಲಾಗಿದೆ. 300 ಮೀಟರ್‌ ವ್ಯಾಪ್ತಿಯಲ್ಲಿ, 8 ಗಂಟೆಗಳಲ್ಲಿ 15 ಲಕ್ಷ ಕ್ಯೂಬಿಕ್ ಮೀಟರ್‌ ಗಾಳಿಯನ್ನು ಶುದ್ಧೀಕರಿಸಬಲ್ಲ ಯಂತ್ರವನ್ನು ನಿಯೋಜಿಸಲಾಗಿದೆ ಎಂದು ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.