ADVERTISEMENT

ಕೇಜ್ರಿವಾಲ್ ತಂತ್ರ ವಿಫಲವಾಗಿದ್ದಕ್ಕೆ ಆತಿಶಿ ನೃತ್ಯ ಮಾಡಿದ್ದಾರೆ:ಅನುರಾಗ್ ಠಾಕೂರ್

ಪಿಟಿಐ
Published 10 ಫೆಬ್ರುವರಿ 2025, 4:51 IST
Last Updated 10 ಫೆಬ್ರುವರಿ 2025, 4:51 IST
ಅನುರಾಗ್ ಠಾಕೂರ್
ಅನುರಾಗ್ ಠಾಕೂರ್   

ಲಖನೌ: ‘ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರ ತಂತ್ರಗಾರಿಕೆ ವಿಫಲವಾಗಿದ್ದು, ಸೋಲು ಅನುಭವಿಸಿದ್ದಾರೆ ಎಂದು ತಿಳಿದು ನಿರ್ಗಮಿತ ದೆಹಲಿ ಮುಖ್ಯಮಂತ್ರಿ ಆತಿಶಿ ಅವರು ನೃತ್ಯ ಮಾಡಿ ಸಂಭ್ರಮಿಸಿದ್ದಾರೆ’ ಎಂದು ಬಿಜೆಪಿ ಸಂಸದ ಅನುರಾಗ್ ಠಾಕೂರ್ ಆರೋಪಿಸಿದ್ದಾರೆ.

ಕಲ್ಕಾಜಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಬಳಿಕ ಆತಿಶಿ ಅವರು ನೃತ್ಯ ಮಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಠಾಕೂರ್, ‘ಕೇಜ್ರಿವಾಲ್‌ ಅವರ ಸೋಲು ಎಎಪಿಯ ಉನ್ನತ ನಾಯಕರಲ್ಲಿನ ಬಿರುಕುಗಳನ್ನು ಬಹಿರಂಗಪಡಿಸಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ಅರವಿಂದ ಕೇಜ್ರಿವಾಲ್ ಅವರು ಅಣ್ಣಾ ಹಜಾರೆಯವರ ಹೆಸರನ್ನು ಹೇಳಿಕೊಂಡು ರಾಜಕೀಯಕ್ಕೆ ಬಂದರು. ಆದರೆ, ಅವರನ್ನೇ ಮುಗಿಸಿದರು. ನಂತರ ತಮ್ಮದೇ ಆದ ಪಕ್ಷವನ್ನು ಸ್ಥಾಪಿಸಿದ್ದರು. ಈಗ ತಮ್ಮ ಪಕ್ಷದ ಸದಸ್ಯರನ್ನೇ ಮುಗಿಸಿದ್ದಾರೆ’ ಎಂದು ಠಾಕೂರ್ ಗುಡುಗಿದ್ದಾರೆ.

ADVERTISEMENT

ಎಎಪಿ ಪಕ್ಷದ ಕೆಲವು ನಾಯಕರು ಕೇಜ್ರಿವಾಲ್ ಮತ್ತು ಮಂತ್ರಿಗಳ ವಿರುದ್ಧ ಕೆಲಸ ಮಾಡಿದ್ದರು. ಆದರೆ, ಸ್ವತಃ ಕೇಜ್ರಿವಾಲ್ ಅವರು ಸೋಲು ಕಂಡಿರುವುದು ವಿಪರ್ಯಾಸ ಎಂದು ಅವರು ಲೇವಡಿ ಮಾಡಿದ್ದಾರೆ.

‘ಚುನಾವಣಾ ಬ್ಯಾನರ್, ಪೋಸ್ಟರ್ ಸೇರಿದಂತೆ ಚುನಾವಣೆ ಪ್ರಚಾರದಲ್ಲಿ ಆತಿಶಿ ಅವರ ಹೆಸರು ಕಾಣೆಯಾಗಿತ್ತು. ಅವರ ವಿಧಾನಸಭಾ ಕ್ಷೇತ್ರದಲ್ಲಿ ಅವರನ್ನೇ ಸೋಲಿಸಲು ಪ್ರಯತ್ನಿಸಲಾಗಿತ್ತು. ಅದಕ್ಕಾಗಿಯೇ ಚುನಾವಣೆ ಗೆದ್ದ ನಂತರ ಆತಿಶಿ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ’ ಎಂದು ಅವರು ಹೇಳಿದ್ದಾರೆ.

‘ದೆಹಲಿಯಲ್ಲಿ ಬಿಜೆಪಿಯ ಗೆಲುವಿನ ಹಿಂದಿನ ಪ್ರಮುಖ ಅಂಶವೆಂದರೆ ‘ಮೋದಿ ಕಿ ಗ್ಯಾರಂಟಿ’ ಆಗಿದೆ. ಅದು ಈಡೇರುವ ಸಂಪೂರ್ಣ ವಿಶ್ವಾಸ ಇದೆ. ಜನರು ಸುಳ್ಳು ಭರವಸೆ ನೀಡುವವರನ್ನು (ಕೇಜ್ರಿವಾಲ್) ಹೊರಹಾಕಿದ್ದಾರೆ. ಎಎಪಿ ನಾಯಕರ ದುರಾಡಳಿತ, ಭ್ರಷ್ಟಾಚಾರದಿಂದ ದೆಹಲಿ ಜನರು ಬೇಸತ್ತು ಹೋಗಿದ್ದರು’ ಎಂದು ಅವರು ಕುಟುಕಿದ್ದಾರೆ.

70 ಸದಸ್ಯ ಬಲದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 48 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ, ಸರ್ಕಾರ ರಚಿಸಲು ಸಜ್ಜಾಗಿದೆ. ಇತ್ತ ಎಎಪಿ 22 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಪ್ರಮುಖ ಎಎಪಿ ನಾಯಕರು ಸೋಲು ಅನುಭವಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.