ADVERTISEMENT

ಪ್ರತಿಭಟನೆಗೆ ಮಣಿದು ಎರಡು ದಿನ ಮೊದಲೇ ರೈತರನ್ನು ಚರ್ಚೆಗೆ ಆಹ್ವಾನಿಸಿದ ಕೇಂದ್ರ

ಪಿಟಿಐ
Published 1 ಡಿಸೆಂಬರ್ 2020, 1:52 IST
Last Updated 1 ಡಿಸೆಂಬರ್ 2020, 1:52 IST
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ    

ನವದೆಹಲಿ: ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ ಐದು ದಿನಗಳಿಂದ ದೆಹಲಿ ಹೊರ ವಲಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಕೇಂದ್ರ ಸರ್ಕಾರ ಇಂದು (ಮಂಗಳವಾರ) ಚರ್ಚೆಗೆ ಆಹ್ವಾನಿಸಿದೆ.

ಮೂರು ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಳ್ಳುವುದರಿಂದ ಸರ್ಕಾರವೇನೂ ಹಿಂದೆ ಸರಿದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರವೂ ಕೂಡ ಕಾಯ್ದೆಗಳನ್ನು ತಮ್ಮ ಮಾಸಿಕ 'ಮನ್‌ ಕಿ ಬಾತ್‌' ರೇಡಿಯೊ ಕಾರ್ಯಮಕ್ರಮದಲ್ಲಿ ಸಮರ್ಥನೆ ಮಾಡಿಕೊಂಡಿದ್ದರು. ರೈತರ ವಿಚಾರದಲ್ಲಿ 'ವಿರೋಧ ಪಕ್ಷಗಳು ತಂತ್ರಗಾರಿಗೆ ಪ್ರಯೋಗಿಸುತ್ತಿವೆ' ಎಂದು ಮೋದಿ ಆರೋಪಿಸಿದ್ದರು. ಈ ಮಧ್ಯೆ ಕೇಂದ್ರ ಸರ್ಕಾರ ರೈತರೊಂದಿಗೆ ಚರ್ಚೆ ನಡೆಸಲು ನಿರ್ಧರಿಸಿದೆ. ನಿಗದಿತ ಸಮಯಕ್ಕಿಂತಲೂ ಎರಡು ದಿನ ಮೊದಲೇ ರೈತರನ್ನು ಚರ್ಚೆಗೆ ಕರೆಯಲಾಗಿದೆ.

ಈ ಮೊದಲು ಕೇಂದ್ರ ಸರ್ಕಾರ ಭಾನುವಾರ ಚರ್ಚೆಗೆ ಒಪ್ಪಿತ್ತಾದರೂ, ಪ್ರತಿಭಟನಾಕಾರರು ಬುರಾಡಿ ಮೈದಾನಕ್ಕೆ ಬರಬೇಕು ಎಂದು ಹೇಳಿತ್ತು. ಆದರೆ, ಇದನ್ನು ವಿರೋಧಿಸಿದ್ದ ರೈತರು ಸಿಂಗು ಮತ್ತು ಟಿಕ್ರಿ ಗಡಿಗಳಲ್ಲಿ ಪ್ರತಿಭಟನೆ ಮುಂದುವರಿಸಿದ್ದರು.

ADVERTISEMENT

'ಚಳಿ ಮತ್ತು ಕೋವಿಡ್‌-19 ಅನ್ನು ಗಮನದಲ್ಲಿಟ್ಟುಕೊಂಡು ಡಿಸೆಂಬರ್ 3ಕ್ಕಿಂತಲೂ ಮೊದಲೇ ನಾವು ರೈತ ಸಂಘಗಳ ಮುಖಂಡರನ್ನು ಚರ್ಚೆಗೆ ಆಹ್ವಾನಿಸಿದ್ದೇವೆ,' ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು. ಅಲ್ಲದೆ, ರೈತರು ತಮ್ಮ ಪ್ರತಿಭಟನೆಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ್ದ ರೈತ ಪ್ರತಿನಿಧಿಗಳು ನಾವು 'ನಿರ್ಣಾಯಕ' ಯುದ್ಧಕ್ಕಾಗಿ ದೆಹಲಿಗೆ ಬಂದಿದ್ದೇವೆ. ಪ್ರಧಾನಿ ಮೋದಿ ನಮ್ಮ 'ಮನ್ ಕಿ ಬಾತ್ (ಮನದ ಮಾತು)' ಕೇಳಬೇಕು ಎಂದು ಆಗ್ರಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.