ಸಾಂದರ್ಭಿಕ-ಚಿತ್ರ
– ಎ.ಐ ಚಿತ್ರ
ನವದೆಹಲಿ: ಆಗ್ನೇಯ ದೆಹಲಿಯ ಗೋವಿಂದಪುರಿಯಲ್ಲಿ ಹೊತ್ತಿ ಉರಿಯುತ್ತಿದ್ದ ಕಾರಿನಿಂದ ಓರ್ವ ಮಹಿಳೆ ಹಾಗೂ ಐದು ವರ್ಷದ ಮಗುವನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಗುರುವಾರ ಸಂಜೆ 5.30ಕ್ಕೆ ಘಟನೆ ನಡೆದಿದೆ. ತಾರಾ ಅಪಾರ್ಟ್ಮೆಂಟ್ನ ಸಮೀಪ ಇರುವ ಸಿಗ್ನಲ್ನಲ್ಲಿ ಕಾಯುತ್ತಿದ್ದ ವೇಳೆ ಮರ್ಸಿಡೀಸ್ ಬೆಂಜ್ ಕಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ.
ನಿಯಂತ್ರಣ ಕೊಠಡಿಗೆ ಕರೆ ಬಂದ ಕೂಡಲೇ ಪೊಲೀಸರು ಹಾಗೂ ಸಂಚಾರ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ.
‘ಈ ವೇಳೆ ಅಸಾಧಾರಣ ಧೈರ್ಯ ಹಾಗೂ ಸಮಯಪ್ರಜ್ಞೆ ತೋರಿಸಿದ್ದ ಪೊಲೀಸ್ ಸಿಬ್ಬಂದಿಯ ತಂಡ ಕಲ್ಕಾಜಿ ಬಡಾವಣೆಯ ನಿವಾಸಿ 38 ವರ್ಷ ಮಹಿಳೆ ಹಾಗೂ ಅವರ ಐದು ವರ್ಷದ ಮಗುವನ್ನು ಉರಿಯುತ್ತಿದ್ದ ಕಾರಿನಿಂದ ಸುರಕ್ಷಿತವಾಗಿ ರಕ್ಷಿಸಿದೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಬೆಂಕಿ ಹೆಚ್ಚಾಗುತ್ತಿದ್ದಂತೆಯೇ, ದೆಹಲಿ ಜಲ ಮಂಡಲಿಯ ನೀರಿನ ಟ್ಯಾಂಕರ್ ತರಿಸಿ ಬೆಂಕಿಯನ್ನು ಆರಿಸಲಾಗಿದೆ. ತ್ವರಿತ ಸಮನ್ವಯ ಮತ್ತು ಪ್ರಯತ್ನಗಳಿಂದ ಬೆಂಕಿಯನ್ನು ನಂದಿಸಿ, ಪ್ರಾಣಹಾನಿ ಅಥವಾ ಹತ್ತಿರದ ವಾಹನಗಳಿಗೆ ಹಾನಿಯಾಗುವುದನ್ನು ತಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಳಿಕ ತನ್ನನ್ನು ಹಾಗೂ ಮಗುವನ್ನು ರಕ್ಷಣೆ ಮಾಡಿದ್ದಕ್ಕೆ ಪೊಲೀಸರಿಗೆ ಮಹಿಳೆ ಧನ್ಯವಾದ ಅರ್ಪಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.