
ಸಿಖ್ ವಿರೋಧಿ ಗಲಭೆ ಸಂತ್ರಸ್ತರ ಕುಟುಂಬದವರಿಗೆ ಉದ್ಯೋಗ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ (ಮೇಲಿನ ಸಾಲಿನಲ್ಲಿ ಮಧ್ಯದವರು)
ಕೃಪೆ: ಪಿಟಿಐ
ನವದೆಹಲಿ: 1984ರ ಸಿಖ್ ವಿರೋಧಿ ಗಲಭೆಯಲ್ಲಿ ನಲುಗಿದ ಕುಟುಂಬಗಳ 36 ಮಂದಿ ಅವಲಂಬಿತರಿಗೆ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಶುಕ್ರವಾರ ಉದ್ಯೋಗ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದರು.
‘ಇದು ದೆಹಲಿ ಸರ್ಕಾರ ನೀಡುತ್ತಿರುವ ಉದ್ಯೋಗ ಮಾತ್ರವಲ್ಲ, ಈ ಕಾರ್ಯವು ಮಾನವ ಘನತೆಯನ್ನು ಪುನಃಸ್ಥಾಪಿಸುವುದಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.
‘1984ರ ಸಿಖ್ ಗಲಭೆಯು ಮರೆಯಲಾಗದ ದುರಂತ. ಈ ಕುಟುಂಬಗಳು ಅನುಭವಿಸಿದ ನಷ್ಟವನ್ನು ಯಾವುದೇ ಪರಿಹಾರದಿಂದ ತುಂಬಿಕೊಡಲು ಸಾಧ್ಯವಿಲ್ಲ. ದೆಹಲಿ ಸರ್ಕಾರವು ಈ ಕುಟುಂಬಗಳ ಅವಲಂಬಿತರಿಗೆ ಘನತೆಯ ಬದುಕನ್ನು ಕಟ್ಟಿಕೊಡಲು ಬದ್ಧವಾಗಿದೆ’ ಎಂದು ರೇಖಾ ಗುಪ್ತಾ ಹೇಳಿದರು.
ವಿಶೇಷ ತನಿಖಾ ತಂಡವನ್ನು(ಎಸ್ಐಟಿ) ರಚಿಸುವ ಮೂಲಕ ಪ್ರಧಾನಿ ಮೋದಿ ಅವರು ಸಂತ್ರಸ್ತ ಕುಟುಂಬಗಳಿಗೆ ತ್ವರಿತವಾಗಿ ನ್ಯಾಯ ಲಭಿಸುವಂತೆ ಮಾಡಿದ್ದಾರೆ. ಗಲಭೆಯಿಂದ ಸಂಕಷ್ಟಕ್ಕೀಡಾದ ಕುಟುಂಬದ ಒಟ್ಟು 55 ಮಂದಿಗೆ ವಿವಿಧ ಇಲಾಖೆಗಳಲ್ಲಿ ಬಹು ಕಾರ್ಯ ಸಿಬ್ಬಂದಿ (ಎಂಟಿಎಸ್) ಉದ್ಯೋಗ ಲಭಿಸಿದೆ ಎಂದರು.
‘ದೆಹಲಿ ಸರ್ಕಾರದ ಕ್ರಮವು ನ್ಯಾಯಕ್ಕಾಗಿ ದಶಕಗಳಿಂದ ಹೋರಾಡುತ್ತಿದ್ದ ಜನರ ಆಳವಾದ ಗಾಯದ ಮೇಲೆ ಹೆಚ್ಚಿರುವ ನಿಜವಾದ ಮುಲಾಮು’ ಎಂದು ಸಚಿವ ಮಜಿಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.