ADVERTISEMENT

ಟ್ರ್ಯಾಕ್ಟರ್‌ಗೆ ಬೆಂಕಿ: ಪಂಜಾಬ್‌ ಯುವ ಕಾಂಗ್ರೆಸ್‌ ಅಧ್ಯಕ್ಷ ಪೊಲೀಸರ ವಶಕ್ಕೆ

ಪಿಟಿಐ
Published 29 ಸೆಪ್ಟೆಂಬರ್ 2020, 11:18 IST
Last Updated 29 ಸೆಪ್ಟೆಂಬರ್ 2020, 11:18 IST
ದೆಹಲಿ ಗೇಟ್‌ ಬಳಿ ಯುವ ಕಾಂಗ್ರೆಸ್‌ ಕಾರ್ಯಕರ್ತರ ಬೆಂಕಿಗೆ ಆಹುತಿಯಾದ ಟ್ರ್ಯಾಕ್ಟರ್‌
ದೆಹಲಿ ಗೇಟ್‌ ಬಳಿ ಯುವ ಕಾಂಗ್ರೆಸ್‌ ಕಾರ್ಯಕರ್ತರ ಬೆಂಕಿಗೆ ಆಹುತಿಯಾದ ಟ್ರ್ಯಾಕ್ಟರ್‌   

ನವದೆಹಲಿ: ಭಾರತ ಬಂದ್‌ ಪ್ರತಿಭಟನೆ ವೇಳೆ, ದೆಹಲಿಯ ಇಂಡಿಯಾ ಗೇಟ್ ಬಳಿ ಸೋಮವಾರ ಟ್ರ್ಯಾಕ್ಟರ್ ಸುಟ್ಟ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಪಂಜಾಬ್‌ನ ಯುವ ಕಾಂಗ್ರೆಸ್ ಅಧ್ಯಕ್ಷ ಬ್ರಿಂದರ್ ಧಿಲ್ಲೋನ್ ಎಂಬುವವರನ್ನು ಮಂಗಳವಾರ ವಶಕ್ಕೆ ಪಡೆದಿದ್ದಾರೆ.

ವಿವಾದಾತ್ಮಕ ಕೃಷಿ ಮಸೂದೆ ವಿರೋಧಿಸಿ ದೇಶದ ವಿಪಕ್ಷಗಳು ಸೋಮವಾರ ಕರೆ ನೀಡಲಾಗಿದ್ದ ಭಾರತ ಬಂದ್‌ ಪ್ರತಿಭಟನೆ ವೇಳೆ ಕಾಂಗ್ರೆಸ್ ಯುವ ಘಟಕದ ಕಾರ್ಯಕರ್ತರು ಸೋಮವಾರ ರಾಷ್ಟ್ರಪತಿ ಭವನ ಮತ್ತು ಸಂಸತ್ತಿನಿಂದ ಕೆಲವೇ ಮೀಟರ್ ದೂರದಲ್ಲಿರುವ ಇಂಡಿಯಾ ಗೇಟ್ ಬಳಿ ಟ್ರ್ಯಾಕ್ಟರ್‌ಗೆ ಬೆಂಕಿ ಇಟ್ಟಿದ್ದರು. ಘಟನೆ ಸಂಬಂಧ ಟೀಕೆಗಳು ಕೇಳಿ ಬಂದಿವೆ.

ಈ ಘಟನೆಯಲ್ಲಿ ಪಂಜಾಬ್‌ನ ಯುವ ಕಾಂಗ್ರೆಸ್ ಅಧ್ಯಕ್ಷ ಬ್ರಿಂದರ್ ಧಿಲ್ಲೋನ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಇದೇ ಘಟನೆಗೆ ಸಂಬಂಧಿಸಿದಂತೆ ಪಂಜಾಬ್‌ ಯುವ ಕಾಂಗ್ರೆಸ್‌ನ ಆರು ಮಂದಿಯನ್ನು ಪೊಲೀಸರು ಸೋಮವಾರವೇ ಬಂಧಿಸಿದ್ದರು. ಅಲ್ಲದೆ, ಎರಡು ವಾಹನಗಳನ್ನು ಸಹ ವಶಪಡಿಸಿಕೊಂಡಿದ್ದರು.

ರಾಜ್‌ಪಾತ್‌ನ ಮಾನ್ ಸಿಂಗ್ ಕ್ರಾಸಿಂಗ್‌ಗೆ ಟ್ರ್ಯಾಕ್ಟರ್‌ ಅನ್ನು ಟ್ರಕ್‌ನಲ್ಲಿ ಸಾಗಿಸಿ ತಂದಿದ್ದ 20 ಮಂದಿ ಪಂಜಾಬ್‌ ಯುವ ಕಾಂಗ್ರೆಸ್‌ ಘಟಕದ ಕಾರ್ಯಕರ್ತರು ಅದಕ್ಕೆ ಬೆಂಕಿ ಹಚ್ಚಿ ಸುಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪಂಜಾಬ್‌ನ ಯುವ ಕಾಂಗ್ರೆಸ್ ಕಾರ್ಯಕರ್ತರು ಪಂಜಾಬ್ ಪೊಲೀಸರ ಕಾರಿನಲ್ಲಿ ದೆಹಲಿಗೆ ಬಂದಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.