ನವದೆಹಲಿಯ ರಾಷ್ಟ್ರಪತಿ ಭವನದ ಬಳಿ ಸೋಮವಾರ ಆವರಿಸಿದ್ದ ಹಾನಿಕಾರಕ ಹೊಗೆ ಮಂಜು
–ಪಿಟಿಐ ಚಿತ್ರ
ನವದೆಹಲಿ: ‘ವಾಯುಮಾಲಿನ್ಯ ನಿಯಂತ್ರಣ ಕ್ರಮವಾಗಿ ದೆಹಲಿಯಲ್ಲಿ ನ. 13ರಿಂದ 20ರವರೆಗೆ ಸಮ ಹಾಗೂ ಬೆಸ ನೋಂದಣಿ ಸಂಖ್ಯೆ ಆಧಾರದಲ್ಲಿ ಕಾರುಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲು ದೆಹಲಿ ಸರ್ಕಾರ ನಿರ್ಧರಿಸಿದೆ.
‘ದೀಪಾವಳಿ ಹಬ್ಬದ ಬಳಿಕ ದೆಹಲಿಯಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ. ಯೋಜನೆಯ ವಿಸ್ತರಣೆ ಕುರಿತು ನವೆಂಬರ್ 20ರ ಬಳಿಕ ಈ ನಿರ್ಧರಿಸಲಾಗುವುದು‘ ಎಂದು ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವಿನಾಯಿತಿ ಒಳಗೊಂಡಂತೆ ಸಮ–ಬೆಸ ಸಂಖ್ಯೆಯ ವಾಹನಗಳ ಬಳಕೆ ಕುರಿತ ವಿವರಗಳನ್ನು ಸಾರಿಗೆ ಇಲಾಖೆಯ ಜೊತೆಗೆ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು. ಈ ಯೋಜನೆಯನ್ನು ಮೊದಲಿಗೆ 2016ರಲ್ಲಿ ಜಾರಿಗೆ ತರಲಾಗಿತ್ತು.
2018ಲ್ಲಿ ಇಂಧನ ಮತ್ತು ಸಂಪನ್ಮೂಲ ಸಂಸ್ಥೆಯು ನಡೆಸಿದ್ದ ಅಧ್ಯಯನದ ಪ್ರಕಾರ, ದೆಹಲಿಯಲ್ಲಿ ವಾಯುಮಾಲಿನ್ಯಕ್ಕೆ ವಾಹನಗಳ ಪಾಲು ಶೇ 40ರಷ್ಟು ಎಂದು ಗೊತ್ತಾಗಿತ್ತು.
ಮನೆಯಿಂದಲೇ ಕೆಲಸ: ಅಲ್ಲದೇ, ‘ಸರ್ಕಾರಿ ಹಾಗೂ ಖಾಸಗಿ ವಲಯದ ಶೇಕಡಾ 50ರಷ್ಟು ನೌಕರರಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕಲ್ಪಿಸುವ ಕುರಿತು ದೀಪಾವಳಿ ಬಳಿಕ ನಿರ್ಧರಿಸಲಾಗುವುದು’ ಎಂದರು.
ಕೇಂದ್ರ ಸರ್ಕಾರದ ವಾಯು ಮಾಲಿನ್ಯ ನಿಯಂತ್ರಣ ಯೋಜನೆಯಡಿ ಅನುಸರಿಸಬೇಕಾದ ಕಠಿಣ ಕ್ರಮಗಳ ಕುರಿತು ದೆಹಲಿ–ಎನ್ಸಿಆರ್ ವಲಯದಕ್ಕೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ದೆಹಲಿಯ ಸೋಮವಾರದ ವಾಯು ಗುಣಮಟ್ಟದ ಸೂಚ್ಯಂಕ 421 ಆಗಿದೆ. ಇದು ಭಾನುವಾರಕ್ಕಿಂತಲೂ ಉತ್ತಮವಾಗಿದೆ ಎಂದು ದೆಹಲಿ-ಎನ್ಸಿಆರ್ನ ಭೂ ವಿಜ್ಞಾನ ಸಚಿವಾಲಯದ ವಾಯು ಗುಣಮಟ್ಟ ಮುನ್ನೆಚ್ಚರಿಕಾ ಸಂಸ್ಥೆ ತಿಳಿಸಿದೆ.
ಭೌತಿಕ ತರಗತಿಗಳ ಸ್ಥಗಿತಕ್ಕೆ ನಿರ್ದೇಶನ: ’10 ಮತ್ತು 12ನೇ ತರಗತಿಗಳನ್ನು ಹೊರತುಪಡಿಸಿ, ಎಲ್ಲ ಶಾಲೆಗಳ ಭೌತಿಕ ತರಗತಿಗಳನ್ನು ಸ್ಥಗಿತಗೊಳಿಸಬೇಕೆಂದು ನಿರ್ದೇಶಿಸಲಾಗಿದೆ’ ಎಂದು ಸಚಿವ ಗೋಪಾಲ್ ರೈ ತಿಳಿಸಿದರು.
ಉತ್ತರಪ್ರದೇಶದ ಮೀರತ್ನಲ್ಲಿ ವಾಯುಮಾಲಿನ್ಯ ಅಧಿಕವಾಗಿದ್ದು ಶಾಲಾ ಮಕ್ಕಳು ಮಾಸ್ಕ್ ಧರಿಸಿ ತರಗತಿಗಳಿಗೆ ಹಾಜರಾದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.