ಮುಂಬೈ:ಮುಂದಿನ ಐದು ವರ್ಷವೂ ನಾನೇ ಮುಖ್ಯಮಂತ್ರಿಯಾಗಿರಲಿದ್ದೇನೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮಂಗಳವಾರ ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ಪತ್ರಕರ್ತರ ಬಳಿ ಮಾತನಾಡಿದ ಅವರು, ‘ಶಿವಸೇನಾಗೆ ಎರಡೂವರೆ ವರ್ಷ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡುತ್ತೇವೆ ಎಂದು ಚುನಾವಣಾಪೂರ್ವದಲ್ಲಿ ಮಾತು ಕೊಟ್ಟಿಲ್ಲ’ ಎಂದರು.
ಇದನ್ನೂ ಓದಿ:ರಾಜ್ಯಪಾಲರನ್ನು ಭೇಟಿಮಾಡಿದ ನಾಯಕರು
‘ಲೋಕಸಭಾ ಚುನಾವಣೆಗೂ ಮುನ್ನ ಮೈತ್ರಿ ಮಾಡಿಕೊಳ್ಳಲಾಗಿತ್ತು. ಆಗ ಶಿವಸೇನಾಗೆ ಮಾತುಕೊಟ್ಟಿರಲಿಲ್ಲ. ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರ ಮುಂದಿನ ಐದುವ ವರ್ಷ ಸ್ಥಿರ ಮತ್ತು ದಕ್ಷ ಸರ್ಕಾರ ನೀಡಲಿದೆ’ ಎಂದು ಅವರು ಹೇಳಿದರು.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ 105 ಮತ್ತು ಶಿವಸೇನಾ 56 ಸ್ಥಾನ ಗಳಿಸಿವೆ.
50:50ರಂತೆ ಅಧಿಕಾರ ಹಂಚಿ ಮಾಡಿಕೊಳ್ಳುವ ಬಗ್ಗೆ ಬಿಜೆಪಿ ಜತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಕಳೆದ ವಾರ ಹೇಳಿದ್ದರು. ಬಳಿಕ ಬಿಜೆಪಿ–ಶಿವಸೇನಾ ಮಧ್ಯೆ ಅಧಿಕಾರ ಹಂಚಿಕೆ ಹಗ್ಗಜಗ್ಗಾಟ ಮುಂದುವರಿದಿದೆ. ಉಭಯ ಪಕ್ಷಗಳ ನಾಯಕರ ನಡುವಣ ವಾಕ್ಸಮರ ಹೆಚ್ಚಾಗಿದೆ.
ನಾಳೆ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ:ಬುಧವಾರ ಸಭೆ ಸೇರಲಿರುವ ಬಿಜೆಪಿ ಶಾಸಕರು ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲಿದ್ದಾರೆ ಎಂದೂ ಫಡಣವೀಸ್ ಮಾಹಿತಿ ನೀಡಿದರು. ಶಾಸಕಾಂಗ ಪಕ್ಷದ ನಾಯಕನ ಹೆಸರನ್ನು ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ಸೂಚಿಸಿದ್ದಾರೆ. ಅಧಿಕೃತವಾಗಿ ಆಯ್ಕೆ ಮಾಡುವುದಷ್ಟೇ ಬಾಕಿ ಉಳಿದಿದೆ ಎಂದು ಅವರು ಹೇಳಿದರು.
ಇನ್ನಷ್ಟು...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.