ವರ್ಧಮಾನ್/ಕಲ್ಯಾಣಿ: ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮದಲ್ಲೇ ಕ್ಲೀನ್ಬೋಲ್ಡ್ ಆಗಿದ್ದಾರೆ. ಅವರ ತಂಡದ ಆಟಗಾರರೆಲ್ಲರೂ ಔಟ್ ಆಗಿದ್ದಾರೆ. ಈಗ ಮಮತಾ ಅವರ ತಂಡದವರು ಮೈದಾನ ಬಿಟ್ಟು ನಡೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಲೇವಡಿ ಮಾಡಿದ್ದಾರೆ.
ಇಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಈಗಾಗಲೇ ಸೆಂಚುರಿ ಬಾರಿಸಿದೆ ಎಂದು ಹೇಳಿದ್ದಾರೆ. 'ನಂದಿಗ್ರಾಮದಲ್ಲಿ ಜನರು ಬಿಜೆಪಿ ಪರವಾಗಿ ಬೌಂಡರಿ, ಸಿಕ್ಸರ್ ಬಾರಿಸಿದ್ದಾರೆ. ಹೀಗಾಗಿ ಬಿಜೆಪಿ ಈಗಾಗಲೇ ಶತಕ ಬಾರಿಸಿದೆ. ನಾಲ್ಕು ಹಂತದಲ್ಲೇ ಟಿಎಂಸಿ ಸೋತು ಸುಣ್ಣವಾಗಿದೆ. ಅರ್ಧಪಂದ್ಯದಲ್ಲೇ ಟಿಎಂಸಿಯನ್ನು ಕ್ಲೀನ್ ಸ್ವೀಪ್ ಮಾಡಿದ್ದೇವೆ' ಎಂದು ಮೋದಿ ಅವರು ಹೇಳಿದ್ದಾರೆ.
ಪರಿಶಿಷ್ಟ ಜಾತಿಯ ಜನರು, ಬಡವರ ಹಕ್ಕುಗಳನ್ನು ಕಿತ್ತುಕೊಳ್ಳಲು ಮಮತಾ ಬ್ಯಾನರ್ಜಿ ಅವರ ಟಿಎಂಸಿ ಸಂಚು ನಡೆಸಿದೆ. ಕೂಚ್ಬಿಹಾರ್ನ ಹಿಂಸಾಚಾರವು ಈ ಸಂಚಿನ ಭಾಗವೇ ಆಗಿದೆ. ಸೋಲು ಮತ್ತು ಗೆಲುವು ಪ್ರಜಾಪ್ರಭುತ್ವದ ಭಾಗಗಳು. ಆದರೆ, ಇಲ್ಲಿ ಜನರ ಹಕ್ಕುಗಳನ್ನು ಕಿತ್ತುಕೊಳ್ಳಲು ಅವಕಾಶವಿಲ್ಲ.
'ಪ್ರಜಾಪ್ರಭುತ್ವದಲ್ಲಿ ಆಟವನ್ನು ಆರಂಭಿಸುವವರು ಜನರು. ಆಟವನ್ನು ಕೊನೆಮಾಡುವವರೂ ಜನರೇ. ಬಂಗಾಳದ ಜನರು ಈಗ ತಮ್ಮ ಆಟ ಆರಂಭಿಸಿದ್ದಾರೆ. ದೀದಿ ಎಲ್ಲವನ್ನೂ ತಮ್ಮ ಅಳಿಯನಿಗೆ ಕೊಡಲು ನಿರ್ಧರಿಸಿದ್ದರು. ಆದರೆ ನಿಮ್ಮ ಆಟವನ್ನು ನಿಲ್ಲಿಸಬೇಕು ಎಂದು ಜನರು ನಿರ್ಧರಿಸಿದ್ದಾರೆ' ಎಂದು ಮೋದಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.