ADVERTISEMENT

ಭಾರತದ ಭೂ ಪ್ರದೇಶ ಅತಿಕ್ರಮಿಸಲು ಚೀನಾಕ್ಕೆ ಅವಕಾಶ ಕೊಟ್ಟಿಲ್ಲ: ರಾಜನಾಥ್‌ ಸಿಂಗ್‌

ಪಿಟಿಐ
Published 13 ಆಗಸ್ಟ್ 2022, 16:17 IST
Last Updated 13 ಆಗಸ್ಟ್ 2022, 16:17 IST
ರಾಜನಾಥ್‌ ಸಿಂಗ್‌
ರಾಜನಾಥ್‌ ಸಿಂಗ್‌    

ಜೋಧಪುರ: ಚೀನಾ ನಮ್ಮ ಭೂಪ್ರದೇಶ ಪ್ರವೇಶಿಸಲು ಬಿಟ್ಟಿಲ್ಲ ಮತ್ತು ಭಾರತ ಭದ್ರತೆಗೆ ಸಂಬಂಧಿಸಿದ ವಿಷಯಗಳನ್ನು ರಾಜಕೀಯ ಪಕ್ಷಗಳು ರಾಜಕೀಯಗೊಳಿಸಬಾರದು ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಶನಿವಾರ ಹೇಳಿದ್ದಾರೆ.

ಹೇಳಿಕೆಗಳು ಮತ್ತು ನಂಬಿಕೆಗಳು ಏನೇ ಇರಲಿ ಭಾರತವು ತನ್ನ ಭೂಪ್ರದೇಶವನ್ನು ಅತಿಕ್ರಮಿಸಲು ಯಾರನ್ನೂ ಬಿಟ್ಟಿಲ್ಲ ಎಂದು ಅವರು ತಿಳಿಸಿದರು.

ಭಾರತದ ಜನರ ಸುರಕ್ಷತೆ ಮತ್ತು ಭದ್ರತೆಗೆ ಸರ್ಕಾರವು ಮೊದಲ ಆದ್ಯತೆ ನೀಡಿದೆ. ದೇಶದ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರಲು ಪ್ರಯತ್ನಿಸುವ ಯಾರಿಗಾದರೂ ಸೂಕ್ತ ಉತ್ತರವನ್ನು ನೀಡಲಾಗುವುದು ಎಂದು ರಾಜನಾಥ್ ಎಚ್ಚರಿಕೆ ನೀಡಿದರು.

‘ಈ ವಿಷಯದಲ್ಲಿ ಅನೇಕ ಘಟನೆಗಳು ನಡೆದು ಹೋಗಿವೆ. ಅದು ನಮ್ಮ ಒಂದಿಬ್ಬರಿಗೆ ತಿಳಿದಿದೆ. ನಾನು ಆ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಆದರೆ ನಾವು ಚೀನಾದವರನ್ನು ನಮ್ಮ ಪ್ರದೇಶದೊಳಗೆ ನುಸುಳಲು ಬಿಟ್ಟಿಲ್ಲ’ ಎಂದು ರಾಜನಾಥ್‌ ಸಿಂಗ್‌ ಮಾರ್ಮಿಕವಾಗಿ ಮಾತನಾಡಿದರು.

‘ಈ ವಿಚಾರದಲ್ಲಿ ರಾಜಕೀಯ ಮಾಡಬೇಡಿ’ ಎಂದು ರಾಜಕೀಯ ಪಕ್ಷಗಳಿಗೆ ರಾಜನಾಥ್ ಮನವಿ ಮಾಡಿದರು.

‘ಸುಸಜ್ಜಿತ ಶಸ್ತ್ರಾಸ್ತ್ರಗಳು ಮತ್ತು ತಂತ್ರಜ್ಞಾನದೊಂದಿಗೆ ನಮ್ಮ ಸಶಸ್ತ್ರ ಪಡೆಗಳು ಸಜ್ಜಾಗಿವೆ. ಭವಿಷ್ಯದ ಎಲ್ಲಾ ಬೆದರಿಕೆಗಳನ್ನು ಎದುರಿಸಲು ನಮ್ಮ ಪಡೆಗಳು ತಯಾರಾಗಿವೆ’ ಎಂದು ರಾಜನಾಥ್ ಇದೇ ವೇಳೆ ಸ್ಪಷ್ಟಪಡಿಸಿದರು.

ಬಲಿಷ್ಠ ಸೇನೆಯನ್ನು ಕಟ್ಟಲು ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಬೇಕಾದ ಅಗತ್ಯವನ್ನು ಅವರು ಒತ್ತಿ ಹೇಳಿದರು. ರಕ್ಷಣಾ ಇಲಾಖೆಯು ಸ್ವದೇಶಿ ಶಸ್ತ್ರಾಸ್ತ್ರಗಳನ್ನು ತಯಾರಿಸಲು ಹಲವಾರು ಸುಧಾರಣೆಗಳನ್ನು ಕೈಗೊಂಡಿದೆ ಎಂದು ಹೇಳಿದರು.

‘ಕಳೆದ ಕೆಲವು ವರ್ಷಗಳಲ್ಲಿ ಸರ್ಕಾರವು ಕೈಗೊಂಡ ಕ್ರಮಗಳಿಂದಾಗಿ, ವಿಶ್ವದ ಅಗ್ರ 25 ರಕ್ಷಣಾ ರಫ್ತುದಾರರ ಪಟ್ಟಿಯಲ್ಲಿ ಸ್ಥಾನ ಪಡೆಯುವತ್ತ ಭಾರತ ಧಾಪುಗಾಲು ಹಾಕುತ್ತಿದೆ. ಈ ದಶಕ ಪೂರ್ಣಗೊಳ್ಳುವ ಹೊತ್ತಿಗೆ, ಭಾರತವು ರಕ್ಷಣಾ ಸಾಧನಗಳ ತಯಾರಿಕೆಯಲ್ಲಿ ಮಾತ್ರ ಮುಂದಿರುವುದಿಲ್ಲ, ಬದಲಿಗೆ ಮಿತ್ರ ರಾಷ್ಟ್ರಗಳ ರಕ್ಷಣಾ ಅಗತ್ಯಗಳನ್ನೂ ಪೂರೈಸಲಿದೆ’ ಎಂದು ತಿಳಿಸಿದ್ದಾರೆ.

ಜೋಧಪುರದ ಸಾಲ್ವನ್ ಕಲನ್ ಗ್ರಾಮದಲ್ಲಿ ರಜಪೂತ ದಂಡನಾಯಕ ವೀರ್ ದುರ್ಗಾದಾಸ್ ರಾಥೋಡ್ ಪ್ರತಿಮೆ ಅನಾವರಣಗೊಳಿಸಿದ ರಾಜನಾಥ್, ‘ರಾಜಕಾರಣಿಗಳು ಹೇಳುವುದಕ್ಕೂ ಮತ್ತು ಮಾಡುವದಕ್ಕೂ ವ್ಯತ್ಯಾಸವಿದೆ ಎನ್ನಲಾಗುತ್ತದೆ. ಆದರೆ, ಬಿಜೆಪಿ ಏನು ಹೇಳುತ್ತದೆಯೋ ಅದನ್ನೇ ಮಾಡುತ್ತದೆ’ ಎಂದರು.

ಪ್ರತಿಮೆ ಸ್ಥಾಪನೆಯನ್ನು ಶ್ಲಾಘಿಸಿದ ರಾಜನಾಥ್, ರಾಥೋಡ್ ಧಾರ್ಮಿಕ ಸಾಮರಸ್ಯಕ್ಕಾಗಿ ಹೆಸರಾದವರು ಎಂದು ಹೇಳಿದರು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.