ADVERTISEMENT

ತಮಿಳುನಾಡು: ಕಾಗದ ರಹಿತ ಬಜೆಟ್‌ ಮಂಡಿಸಿದ ಡಿಎಂಕೆ, ಪ್ರತಿಪಕ್ಷಗಳ ಸಭಾತ್ಯಾಗ

ಪಿಟಿಐ
Published 13 ಆಗಸ್ಟ್ 2021, 8:01 IST
Last Updated 13 ಆಗಸ್ಟ್ 2021, 8:01 IST
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್   

ಚೆನ್ನೈ: ಪ್ರಮುಖ ವಿರೋಧ ಪಕ್ಷ ಎಐಎಡಿಎಂಕೆ ಸದಸ್ಯರ ಸಭಾತ್ಯಾಗದ ನಡುವೆಯೇ ಡಿಎಂಕೆ ನೇತೃತ್ವದ ಸರ್ಕಾರ ಶುಕ್ರವಾರ ತನ್ನ ಮೊದಲ ಬಜೆಟ್‌ ಮಂಡಿಸಿತು. ಹಣಕಾಸು ಸಚಿವ ಪಲನ್ವೇಲ್‌ ತ್ಯಾಗರಾಜನ್‌ ಅವರು ಇದೇ ಮೊದಲ ಬಾರಿಗೆ ಕಾಗದ ರಹಿತ ಬಜೆಟ್‌ ಮಂಡಿಸಿದರು.

ವಿಧಾನಸಭಾಧ್ಯಕ್ಷ ಅಪ್ಪಾವು ಅವರು ಕಂಪ್ಯೂಟರ್‌ಗಳಲ್ಲಿ ಹೇಗೆ ಆಯ–ವ್ಯಯದ ದಾಖಲೆಗಳನ್ನು ಓದಬೇಕು ಎಂಬುದರ ಬಗ್ಗೆ ಶಾಸಕರಿಗೆ ಸಲಹೆ ನೀಡಿದರು. ಇದಾದ ನಂತರ, ವಿರೋಧ ಪಕ್ಷದ ನಾಯಕ ಕೆ. ಪಳನಿಸ್ವಾಮಿ ಅವರು ಈ ಅಧಿವೇಶನದಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಅವಕಾಶ ನೀಡುವಂತೆ ಸಭಾಧ್ಯಕ್ಷರಲ್ಲಿ ಮನವಿ ಮಾಡಿ ತಾವು ಸಿದ್ಧಪಡಿಸಿಕೊಂಡು ತಂದಿದ್ದ ಮಾಹಿತಿಯನ್ನು ಓದಲು ಪ್ರಾರಂಭಿಸಿದರು.

ಇದೇ ವೇಳೆ ವಿರೋಧ ಪಕ್ಷದ ಶಾಸಕರು ಎದ್ದು ನಿಂತು, ‘ಪಳನಿಸ್ವಾಮಿ ಅವರಿಗೆ ತಮ್ಮ ಅಭಿಪ್ರಾಯ ಮಂಡಿಸಲು ಅವಕಾಶ ನೀಡಬೇಕು‘ ಎಂದು ಸಭಾಧಕ್ಷ ಅಪ್ಪಾವು ಅವರಲ್ಲಿ ವಿನಂತಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್‌, ‘ಸಾಮಾನ್ಯ ಚರ್ಚೆಯ ವೇಳೆ ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು. ಈಗ ನೀವು ಕುಳಿತುಕೊಳ್ಳಿ‘ ಎಂದು ಹೇಳಿದರು. ಆದರೆ ಪಳನಿಸ್ವಾಮಿ ತಮ್ಮ ಮಾತುಗಳನ್ನು ಮುಂದುವರಿಸಿದರು.

ADVERTISEMENT

ಅವರ ಮಾತು ಮುಗಿಯುತ್ತಿದ್ದಂತೆ ಎಐಎಡಿಎಂಕೆ, ಬಿಜೆಪಿ ಮತ್ತು ಪಿಎಂಕೆ ಸೇರಿದಂತೆ ವಿರೋಧ ಪಕ್ಷಗಳ ಎಲ್ಲ ಶಾಸಕರು ಪಳನಿಸ್ವಾಮಿ ನೇತೃತ್ವದಲ್ಲಿ ಸದನದಿಂದ ಹೊರ ನಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.