ಮುಂಬೈ: ವ್ಯಕ್ತಿಯೊಬ್ಬರು ತನ್ನ ಪತ್ನಿ ವಿರುದ್ಧ ವ್ಯಭಿಚಾರದ ಆರೋಪ ಮಾಡಿದ ಮಾತ್ರಕ್ಕೆ, ಅವರ ಅಪ್ರಾಪ್ತ ವಯಸ್ಸಿನ ಮಗುವನ್ನು ಪಿತೃತ್ವ ಪರೀಕ್ಷೆಗೆ ಒಳಪಡಿಸಲು ಆಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ನ ನಾಗ್ಪುರ ಪೀಠ ತಿಳಿಸಿದೆ.
ಈ ಕುರಿತು ಬಾಲಕನ ಡಿಎನ್ಎ ಪರೀಕ್ಷೆಗೆ ನಿರ್ದೇಶಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ನ್ಯಾಯಮೂರ್ತಿ ಆರ್.ಪಿ.ಜೋಶಿ ಅವರ ಪೀಠ ರದ್ದುಗೊಳಿಸಿದೆ.
ಈ ರೀತಿಯ ಆನುವಂಶಿಕ ಪರೀಕ್ಷೆಯನ್ನು ಅಸಾಧಾರಣ ಪ್ರಕರಣಗಳಲ್ಲಿ ಮತ್ರ ಆದೇಶಿಸಲಾಗುತ್ತದೆ ಎಂದು ಪೀಠ ಹೇಳಿದೆ.
ವ್ಯಭಿಚಾರದ ಆಧಾರದ ಮೇಲೆ ಪುರುಷನು ಪತ್ನಿಯಿಂದ ವಿಚ್ಛೇದನ ಪಡೆಯಲು ಅರ್ಹನಾದ ಮಾತ್ರಕ್ಕೆ ಅದು, ಮಗುವಿನ ಡಿಎನ್ಎ ಪರೀಕ್ಷೆಗೆ ನಿರ್ದೇಶಿಸುವ ಆದೇಶವನ್ನು ಅಂಗೀಕರಿಸುವುದಿಲ್ಲ ಎಂದು ಪೀಠ ತಿಳಿಸಿದೆ. ಈ ಕುರಿತು ಪೀಠ ಜುಲೈ 1ರಂದು ತೀರ್ಪು ನೀಡಿದ್ದು, ಅದರ ಪ್ರತಿ ಬುಧವಾರ ಲಭ್ಯವಾಗಿದೆ.
ಕೌಟುಂಬಿಕ ನ್ಯಾಯಾಲಯವು 12 ವರ್ಷದ ಬಾಲಕನ ಪಿತೃತ್ವ ಪರೀಕ್ಷೆಗೆ ಒಳಪಡಿಸುವಂತೆ 2020ರ ಫೆಬ್ರುವರಿಯಲ್ಲಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ, ಬಾಲಕ ಮತ್ತು ಆತನ ತಾಯಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಡೆಸಿತ್ತು.
ಪರೀಕ್ಷೆಯನ್ನು ಒಪ್ಪಿಕೊಳ್ಳುವ ಅಥವಾ ನಿರಾಕರಿಸುವ ನಿರ್ಧಾರವನ್ನು ತೆಗೆದುಕೊಳ್ಳುವ ಸಾಮರ್ಥ್ಯವಿಲ್ಲದ ವ್ಯಕ್ತಿಯನ್ನು, ವಿಶೇಷವಾಗಿ ಅಪ್ರಾಪ್ತ ಮಕ್ಕಳನ್ನು ರಕ್ತ ಪರೀಕ್ಷೆಗೆ ಒಳಪಡಿಸುವಂತೆ ಒತ್ತಾಯಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿರುವ ತೀರ್ಪನ್ನು ಪೀಠ ಉಲ್ಲೇಖಿಸಿದೆ.
ತಂದೆ, ತಾಯಿ ನಡುವಿನ ಹೋರಾಟದಲ್ಲಿ ಮಗು ಸಾಧನವಾದಾಗ, ನ್ಯಾಯಾಲಯವು ಅ ಮಗುವಿನ ಹಕ್ಕುಗಳ ರಕ್ಷಕನಾಗಬೇಕು ಎಂದು ಹೈಕೋರ್ಟ್ ಒತ್ತಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.