ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಪಟ್ಟಿದ್ದ ಶೋವಿಕ್ ಚಕ್ರವರ್ತಿ, ಇತ್ತೀಚೆಗಿನ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲೇಖಿಸಿ ಜಾಮೀನು ಕೋರಿ ಮತ್ತೊಮ್ಮೆ ಇಲ್ಲಿನ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಸೆಪ್ಟೆಂಬರ್ನಲ್ಲಿ ಮಾದಕ ವಸ್ತು ನಿಯಂತ್ರಣ ಸಂಸ್ಥೆ (ಎನ್ಸಿಬಿ) ಬಂಧಿಸಿದ ನಂತರ ಜಾಮೀನು ಪಡೆಯಲು ಶೋಯಿಕ್ ಮಾಡಿರುವ ಮೂರನೇ ಪ್ರಯತ್ನ ಇದಾಗಿದೆ.
ಈ ಹಿಂದೆ ವಿಶೇಷ ನ್ಯಾಯಾಲಯ ಮತ್ತು ಬಾಂಬೆ ಹೈಕೋರ್ಟ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದವು.
ಎನ್ಡಿಪಿಎಸ್ (ನಾರ್ಕೊಟಿಕ್ ಡ್ರಗ್ಸ್ ಆ್ಯಂಡ್ ಸೈಕೊಟ್ರಾಫಿಕ್ ಸಬ್ಸ್ಟೆನ್ಸಸ್) ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯದ ಮುಂದೆ ಇತ್ತೀಚೆಗೆ ಸಲ್ಲಿಸಲಾದ ಅರ್ಜಿಯಲ್ಲಿ, ಶೋಯಿಕ್ ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿದ್ದಾರೆ. ತೀರ್ಪಿನಲ್ಲಿ ಎನ್ಸಿಬಿ ಅಧಿಕಾರಿಗಳಿಗೆ ನೀಡಿದ 'ತಪ್ಪೊಪ್ಪಿಗೆಯ ಹೇಳಿಕೆಗಳನ್ನು' ಸಾಕ್ಷಿಯಾಗಿ ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ.
ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 25ರ ಪ್ರಕಾರ, ಯಾವುದೇ ಅಪರಾಧದ ಆರೋಪ ಹೊತ್ತ ವ್ಯಕ್ತಿಯ ವಿರುದ್ಧ ಪೊಲೀಸ್ ಅಧಿಕಾರಿಗೆ ನೀಡಿದ ಯಾವುದೇ ತಪ್ಪೊಪ್ಪಿಗೆಯನ್ನು ಸಾಕ್ಷ್ಯವೆಂದು ಸಾಬೀತುಪಡಿಸಲಾಗುವುದಿಲ್ಲ ಎಂದು ಅದು ಹೇಳಿದೆ.
'ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ದೃಷ್ಟಿಯಿಂದಾಗಿ ಸನ್ನಿವೇಶದಲ್ಲಿ ಸ್ಪಷ್ಟವಾದ ಬದಲಾವಣೆಯಾಗಿದೆ, ಅದು ಜಾಮೀನು ಪಡೆಯಲು ಹೊಸ ಪರಿಗಣನೆಗೆ ಅರ್ಹವಾಗಿದೆ' ಎಂದು ಅವರ ಪರ ವಕೀಲ ಸತೀಶ್ ಮನೇಶಿಂದೆ ಅವರ ಮೂಲಕ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.
ಅರ್ಜಿಯಲ್ಲಿ ಶೋವಿಕ್ ಅವರು ಈ ಪ್ರಕರಣದಲ್ಲಿ 'ತಪ್ಪಾಗಿ ಒಳಪಡಿಸಲಾಗಿದೆ' ಎಂದು ಅವರು ಪುನರುಚ್ಚರಿಸಿದ್ದಾರೆ. ಆರೋಪಿಯ ಮೇಲೆ ಸೆಕ್ಷನ್ 27(ಎ) ಅಡಿಯಲ್ಲಿ ಯಾಂತ್ರಿಕವಾಗಿ ಮತ್ತು ಮನಸ್ಸಿನ ಅನ್ವಯವಿಲ್ಲದೆ ಪ್ರಕರಣ ದಾಖಲಿಸಲಾಗಿದೆ ಎಂದು ಅದು ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.