ADVERTISEMENT

ಕುಡಿತದ ಅಮಲಿನಲ್ಲಿ ಸೀಟಿನ ಮೇಲೆ ಮೂತ್ರ ವಿಸರ್ಜನೆ

ನಾಗರಿಕ ವಿಮಾನಯಾನ ಇಲಾಖೆಯಿಂದ ತನಿಖೆಗೆ ಸೂಚನೆ

ಪಿಟಿಐ
Published 2 ಸೆಪ್ಟೆಂಬರ್ 2018, 11:20 IST
Last Updated 2 ಸೆಪ್ಟೆಂಬರ್ 2018, 11:20 IST
ಏರ್‌ ಇಂಡಿಯಾ
ಏರ್‌ ಇಂಡಿಯಾ   

ನವದೆಹಲಿ: ಕುಡಿತದ ಅಮಲಿನಲ್ಲಿ ಪ್ರಯಾಣಿಕನೊಬ್ಬ ಮಹಿಳಾ‍ಪ್ರಯಾಣಿಕರ ಸೀಟಿನ ಮೇಲೆ ಮೂತ್ರ ವಿಸರ್ಜಿಸಿದ ಪ್ರಸಂಗಏರ್ ಇಂಡಿಯಾ ಅಂತರರಾಷ್ಟ್ರೀಯ ವಿಮಾನದಲ್ಲಿ ನಡೆದಿದೆ.

ನವದೆಹಲಿಯಿಂದ ನ್ಯೂಯಾರ್ಕ್‌ಗೆ ಬರುತ್ತಿದ್ದ ಏರ್‌ಇಂಡಿಯಾ ಎಐ 102ರ ವಿಮಾನದಲ್ಲಿ ಆಗಸ್ಟ್‌ 30ರಂದು ಈ ಘಟನೆ ನಡೆದಿದೆ. ಮಹಿಳಾ ಪ್ರಯಾಣಿಕರ ಮಗಳು ಇಂದ್ರಾಣಿ ಘೋಷ್‌ ಅವರು ಶುಕ್ರವಾರ ರಾತ್ರಿ ಈ ವಿಷಯದ ಕುರಿತಂತೆ ಟ್ವೀಟ್‌ ಮಾಡಿದ್ದರು.

‘ಮಾನ್ಯ ಸುರೇಶ್‌ ಪ್ರಭು, ಸುಷ್ಮಾ ಸ್ವರಾಜ್‌ ಅವರೇ, ನನ್ನ ತಾಯಿ ಒಬ್ಬರೇ ನ್ಯೂಯಾರ್ಕ್‌ನಿಂದ ದೆಹಲಿಗೆ ಏರ್‌ಇಂಡಿಯಾ ವಿಮಾನದ ಸೀಟು ಸಂಖ್ಯೆ 36ಡಿಯಲ್ಲಿ ಪ್ರಯಾಣಿಸುತ್ತಿದ್ದರು. ಕುಡಿತದ ಅಮಲಿನಲ್ಲಿದ್ದ ಪ್ರಯಾಣಿಕರೊಬ್ಬರು ಊಟದ ಬಳಿಕ ಸೀಟಿನ ಸುತ್ತ ಹಾಗೂ ಮೇಲೆ ಮೂತ್ರ ವಿಸರ್ಜಿಸಿದ್ದಾನೆ, ತಕ್ಷಣವೇ ಈ ಬಗ್ಗೆ ಗನಹರಿಸಿ’ ಎಂದು ಟ್ವೀಟ್‌ ಮಾಡಿದ್ದರು.

ADVERTISEMENT

ಇದಾದ ಬಳಿಕ ಏರ್‌ ಇಂಡಿಯಾ ತಾಯಿಗೆ ಪ್ರಯಾಣಿಸಲು ಬೇರೆ ಸೀಟಿನ ವ್ಯವಸ್ಥೆ ಮಾಡಿಕೊಟ್ಟಿತು ಎಂದು ಸಾಮಾಜಿಕ ಕಾರ್ಯಕರ್ತೆ ಕವಿತಾ ಕೃಷ್ಣನ್‌ ಕೇಳಿದ ಪ್ರಶ್ನೆಗೆ ಇಂದ್ರಾಣಿ ಉತ್ತರಿಸಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ ತಾಯಿ ಗಾಲಿಕುರ್ಚಿಗಾಗಿ ಕಾದಿದ್ದ ವೇಳೆ ಆರೋಪಿ ಪ್ರಯಾಣಿಕ ತನ್ನ ಪಾಡಿಗೆ ನಡೆದುಹೋದ ಎಂದು ದೂರಿದ್ದಾರೆ.

ತನಿಖೆಗೆ ಸೂಚನೆ: ಈ ಪ್ರಕರಣದ ಕುರಿತಂತೆ ತನಿಖೆ ನಡೆಸುವಂತೆ ವಿಮಾನಯಾನ ಇಲಾಖೆಯ ರಾಜ್ಯ ಸಚಿವ ಜಯಂತ್‌ ಸಿನ್ಹಾ ಅವರು ಏರ್‌ಇಂಡಿಯಾಕ್ಕೆ ಸೂಚನೆ ನೀಡಿದ್ದು, ಈ ವರದಿಯನ್ನು ನಾಗರಿಕ ವಿಮಾನಯಾನದ ನಿರ್ದೇಶನಾಲಯಕ್ಕೆ (ಡಿಜಿಸಿಎ) ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.