ನವದೆಹಲಿ: ಕೇಂದ್ರ ಸರ್ಕಾರದ ಹಿಂದೂ ರಾಷ್ಟ್ರೀಯತೆಯ ರಾಜಕೀಯದ ವಿರುದ್ಧ ಧ್ವನಿ ಎತ್ತುತ್ತಿರುವ ಎಲ್ಲ ಜಾತ್ಯತೀತ, ಜಾತಿ ವಿರೋಧಿ, ಶಿಕ್ಷಣ ತಜ್ಞರು ಮತ್ತು ಬಂಡವಾಳಶಾಹಿ ವಿರೋಧಿ ಹೋರಾಟಗಾರರ ವಿರುದ್ಧ ಕೇಂದ್ರ ಸರ್ಕಾರ ಪಟ್ಟು ಹಿಡಿದಂತೆ ಪ್ರಕರಣಗಳನ್ನು ದಾಖಲಿಸುತ್ತಿದೆ ಎಂದು ಲೇಖಕಿ ಅರುಂಧತಿ ರಾಯ್ ವಾಗ್ದಾಳಿ ನಡೆಸಿದ್ದಾರೆ.
ಭೀಮಾ ಕೊರೇಗಾಂವ್ನಲ್ಲಿ ನಡೆದ ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ದೆಹಲಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಹನಿಬಾಬು ಮುಸಲಿಯಾರ್ವೀಟ್ಟಿಲ್ ಅವರನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿರುವುದನ್ನು ಖಂಡಿಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಜಾತಿ ವಿರೋಧಿಗಳು, ಜಾತ್ಯತೀತರು, ಶಿಕ್ಷಣ ತಜ್ಞರು, ಬಂಡವಾಳಶಾಹಿ ವಿರುದ್ಧದ ಹೋರಾಟದ ರಾಜಕಾರಣ, ಹಿಂದೂ ಫ್ಯಾಸಿಸಂಗೆ ಪರ್ಯಾಯ ಶಕ್ತಿಯಾಗಿ ರೂಪುಗೊಳ್ಳುತ್ತಿದೆ. ಹಿಂದೂ ರಾಷ್ಟ್ರೀಯವಾದಿ ರಾಜಕಾರಣಕ್ಕೆ ಬೆದರಿಕೆಯನ್ನೂ ಒಡ್ಡುತ್ತಿದೆ ಎಂಬ ಭೀತಿಯ ಹಿನ್ನೆಲೆಯಲ್ಲಿ ಸರ್ಕಾರ, ಆ ಹೋರಾಟಗಾರರನ್ನು ಸೆರೆವಾಸಕ್ಕೆ ಕಳುಹಿಸುವ ಮೂಲಕ ಹೋರಾಟದ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ‘ ಎಂದು ದೂರಿದರು.
ಹನಿಬಾಬು ಅವರ ಬಂಧನವನ್ನು ಖಂಡಿಸಿರುವ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆ, ‘ಇಂಥ ಘಟನೆಗಳ ವಿರುದ್ಧ ಚಳವಳಿಕಾರರು, ಪ್ರಗತಿಪರರು ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ಹನಿಬಾಬು ಬಂಧನದ ವಿಷಯದಲ್ಲಿ ನಡೆಯುತ್ತಿರುವ ರಾಜಕೀಯ ಪ್ರೇರಿತ ತನಿಖೆಯನ್ನು ನಿಲ್ಲಿಸಿ, ಅವರನ್ನು ಬಿಡುಗಡೆ ಮಾಡಬೇಕು‘ ಎಂದು ಒತ್ತಾಯಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.