ADVERTISEMENT

ಶರದ್ ಪವಾರ್ ಅವರಿಗೆ ನೋಟಿಸ್ ನೀಡುವಂತೆ ಸೂಚನೆ ನೀಡಿಲ್ಲ: ಚುನಾವಣಾ ಆಯೋಗ

ಪಿಟಿಐ
Published 23 ಸೆಪ್ಟೆಂಬರ್ 2020, 9:50 IST
Last Updated 23 ಸೆಪ್ಟೆಂಬರ್ 2020, 9:50 IST
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್   

ನವದೆಹಲಿ: ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ನೋಟಿಸ್ ಜಾರಿ ಮಾಡುವಂತೆ ಕೇಂದ್ರ ನೇರ ತೆರಿಗೆ ಮಂಡಳಿಗೆ (ಸಿಬಿಡಿಟಿ) ಯಾವುದೇ ನಿರ್ದೇಶನ ನೀಡಿಲ್ಲ ಎಂದು ಚುನಾವಣಾ ಆಯೋಗ ಬುಧವಾರ ತಿಳಿಸಿದೆ.

ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ಬಗ್ಗೆ ಕೆಲವು ವಿವರಣೆ ಕೋರಿ ಆದಾಯ ತೆರಿಗೆ ಇಲಾಖೆಯು ತಮಗೆ ನೊಟೀಸ್ ಜಾರಿ ಮಾಡಿದೆ ಎಂದು ಶರದ್ ಪವಾರ್ ಅವರು ಮಂಗಳವಾರ ಹೇಳಿಕೆ ನೀಡಿದ ಬೆನ್ನಲ್ಲೇ ಕೇಂದ್ರ ಚುನಾವಣಾ ಆಯೋಗವು ಈ ಕುರಿತು ಸ್ಪಷ್ಟನೆ ನೀಡಿದೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಪವಾರ್, ಚುನಾವಣೆ ಸಂಬಂಧ ನೀಡಿದ್ದ ಅಫಿಡವಿಟ್‌ಗಳ ಕುರಿತು ತಮ್ಮ 'ಸ್ಪಷ್ಟೀಕರಣ ಮತ್ತು ವಿವರಣೆಯನ್ನು' ನೀಡುವಂತೆ ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ. ನಿನ್ನೆ ನನಗೆ ನೋಟಿಸ್ ತಲುಪಿದೆ. ಅವರು (ಕೇಂದ್ರ) ಎಲ್ಲ ಸದಸ್ಯರ ನಡುವೆಯೂ ನಮ್ಮನ್ನು ಹೆಚ್ಚು ಪ್ರೀತಿಸುತ್ತಿರುವುದಕ್ಕೆ ನಮಗೆ ಅತೀವ ಸಂತೋಷವಾಗಿದೆ ಎಂದು ಕೇಂದ್ರದ ವಿರುದ್ಧ ವ್ಯಂಗ್ಯವಾಡಿದ್ದರು.

ADVERTISEMENT

ಈ ಕುರಿತಾದ ಮಾಧ್ಯಮಗಳ ವರದಿಗೆ ಪ್ರತಿಕ್ರಿಯಿಸಿರುವ ಚುನಾವಣೆ ಆಯೋಗವು, 'ಪವಾರ್ ಅವರಿಗೆ ನೋಟಿಸ್ ನೀಡುವಂತೆ ಭಾರತದ ಚುನಾವಣಾ ಆಯೋಗ ಸಿಬಿಡಿಟಿಗೆ ಅಂತಹ ಯಾವುದೇ ನಿರ್ದೇಶನ ನೀಡಿಲ್ಲ' ಎಂದು ಹೇಳಿದೆ.

ಪುತ್ರಿ ಸುಪ್ರಿಯಾ ಸುಳೆ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಅವರ ಪುತ್ರ ಆದಿತ್ಯ ಠಾಕ್ರೆ ಅವರಿಗೂ ಇದೇ ರೀತಿಯ ನೋಟಿಸ್ ನೀಡಲಾಗಿದೆ ಎಂದು ವರದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.