ADVERTISEMENT

‘ಪಕೋಡಾ’ ಆರ್ಥಿಕ ದೃಷ್ಟಿಕೋನಗಳಿಂದ ಹಣಕಾಸು ವ್ಯವಸ್ಥೆ ಕುಸಿದಿದೆ: ಕಾಂಗ್ರೆಸ್‌

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2019, 5:54 IST
Last Updated 30 ನವೆಂಬರ್ 2019, 5:54 IST
   

ನವದೆಹಲಿ: ನೆಲಕಚ್ಚುತ್ತಿರುವ ದೇಶದ ಆರ್ಥಿಕತೆಗೆ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳೇ ಕಾರಣವೆಂದು ಕಾಂಗ್ರೆಸ್‌ಟೀಕಿಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಭಾರತದ ಆರ್ಥಿಕತೆಯನ್ನು ಕೋಮಾ ಸ್ಥಿತಿಗೆ ತಳ್ಳಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್‌ ಸಿಂಗ್‌ ಸುರ್ಜೇವಾಲಆರೋಪಿಸಿದ್ದಾರೆ

ಕಳೆದ ಆರು ವರ್ಷಗಳಲ್ಲಿ ಕನಿಷ್ಠ ಇಳಿಕೆ ಕಂಡಿರುವ ಜಿಡಿಪಿ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ.4.5ಕ್ಕೆ ಕುಸಿದಿದೆ. ಕೇಂದ್ರ ಸರ್ಕಾರ ತೆಗೆದುಕೊಂಡ ಉತ್ತೇಜನಾ ಕ್ರಮಗಳು ಆರ್ಥಿಕ ಪ್ರಗತಿಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎನ್ನಲಾಗಿದೆ.

‘ಭಾರತದ ಜಿಡಿಪಿ ಶೇ.4.5% ಕ್ಕೆ ಕುಸಿದಿದೆ. ವಾಸ್ತವದಲ್ಲಿ, ನಾವು ಆರ್ಥಿಕ ಪತನದತ್ತ ಸಾಗುತ್ತಿದ್ದೇವೆ. ಈ ಗಂಭೀರ ವಿಷಯದ ಬಗ್ಗೆ ಬಿಜೆಪಿ ತಲೆ ಕೆಡಿಸಿಕೊಳ್ಳುತ್ತಿಲ್ಲ,’ ಎಂದು ಸುರ್ಜೇವಾಲಾ ಹೇಳಿದ್ದಾರೆ.

ಶುಕ್ರವಾರ ಸಂಜೆ ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ‘ಬಿಜೆಪಿಗೆ ಜಿಡಿಪಿ ಎಂದರೆ ಗೋಡ್ಸೆ ವಿಭಜಕ ರಾಜಕೀಯ (Godse Divisive Politics )’ ಎಂದು ಟೀಕಿಸಿದ್ದಾರೆ. ಆಮೂಲಕ‌ಸಂಸದೆ ಪ್ರಜ್ಞಾ ಠಾಕೂರ್‌ ಅವರ ಗೋಡ್ಸೆ ವಿವಾದವನ್ನು ಉಲ್ಲೇಖಿಸಿದ್ದಾರೆ.

‘ಸೋತಿರುವ ಮೋದಿ ಆರ್ಥಿಕ ನೀತಿ ಮತ್ತು ಪಕೋಡಾ ಆರ್ಥಿಕ ದೃಷ್ಟಿಕೋನಗಳಿಂದ ನಮ್ಮ ಆರ್ಥಿಕತೆ ತೀವ್ರ ಹಿಂಜರಿತ ಕಂಡಿದೆ. ಬಿಜೆಪಿ ಸರ್ಕಾರದ ಅಡಿಯಲ್ಲಿ ಎಲ್ಲ ಹೂಡಿಕೆ ಮತ್ತು ಉದ್ಯೋಗ ದರಗಳು ಸಾರ್ವಕಾಲಿಕ ಹಿನ್ನೆಡೆ ಕಂಡಿವೆ,’ ಎಂದು ಅವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.