ನವದೆಹಲಿ: ಚುನಾವಣೆ ನಡೆಯಲಿರುವ ಪಂಜಾಬ್, ಮಣಿಪುರ ಮತ್ತು ಉತ್ತರ ಪ್ರದೇಶದಲ್ಲಿ ಮತ ಯಾಚನೆಗಾಗಿ ಪಾದಯಾತ್ರೆ ನಡೆಸಲು ಅಭ್ಯರ್ಥಿಗಳಿಗೆ ಮತ್ತು ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗವು ಅನುವು ಮಾಡಿದೆ.
ಕೋವಿಡ್ –19 ಸಾಂಕ್ರಾಮಿಕ ಹರಡುವಿಕೆ ತಡೆಯಲು ಐದು ರಾಜ್ಯಗಳ ಚುನಾವಣಾ ಪ್ರಚಾರದ ಮೇಲೆ ಜ.8ರಂದು ಚುನಾವಣಾ ಆಯೋಗವು ಹಲವಾರು ನಿರ್ಬಂಧಗಳನ್ನು ಹೇರಿತ್ತು. ಆ ನಿರ್ಬಂಧಗಳನ್ನು ಆಯೋಗವು ಸಡಿಲಿಸಿದೆ.
ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಸ್ಡಿಎಂಎ) ನಿಗದಿಪಡಿಸಿದಷ್ಟು ಸಂಖ್ಯೆಯಲ್ಲಿ ಜನರು ಪಾದಯಾತ್ರೆಗಳಲ್ಲಿ ಭಾಗವಹಿಸಬಹುದು. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆ ವರೆಗೆ ಚುನಾವಣಾ ಪ್ರಚಾರ ನಡೆಸುವಂತಿಲ್ಲ. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆ ವರೆಗೆ ಚುನಾವಣಾ ಪ್ರಚಾರ ಕೈಗೊಳ್ಳಬಹುದು. ಪಕ್ಷಗಳು ಮತ್ತು ಅಭ್ಯರ್ಥಿಗಳು ಹೊರಾಂಗಣ ಪ್ರದೇಶದಲ್ಲಿ, ಆ ಸ್ಥಳದ ಸಾಮರ್ಥ್ಯದ ಶೇ 50ರಷ್ಟು ಜನರನ್ನು ಸೇರಿಸಿ ಅಥವಾ ಎಸ್ಡಿಎಂಎ ಸೂಚಿಸುವಷ್ಟು ಜನರನ್ನು ಸೇರಿಸಿ ಚುನಾವಣಾ ಸಭೆ ಮತ್ತು ರ್ಯಾಲಿಗಳನ್ನು ನಡೆಸಬಹುದು ಎಂದು ಆಯೋಗವು ಹೇಳಿದೆ.
ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ, ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ್ ಮತ್ತು ಅನೂಪ್ ಚಂದ್ರ ಪಾಂಡೆ ಅವರು ಚುನಾವಣೆ ನಿಗದಿ ಆಗಿರುವ ರಾಜ್ಯಗಳ ಕೋವಿಡ್–19 ಪರಿಸ್ಥಿತಿಯನ್ನು ಪರಿಶೀಲಿಸಿದರು. ಬಳಿಕ ಈ ಆದೇಶ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.