ಕೋಲ್ಕತ್ತ: ಪಶ್ಚಿಮ ಬಂಗಾಳದ ಬಾಂಕುಡಾದಲ್ಲಿ ಆನೆ ದಾಳಿಯನ್ನೂ ಚುನಾವಣಾ ವಿಷಯವಾಗಿ ಪರಿಗಣಿಸಲಾಗಿದೆ.
ಹಿಂದೆ ಮಾವೋವಾದಿಗಳ ಭೀತಿ ಎದುರಿಸುತ್ತಿದ್ದ ಬಾಂಕುಡಾದ ಪಾತ್ರಾ ಗ್ರಾಮದ ನಿವಾಸಿಗಳು ಈಗ ಸದಾ ಆನೆ ದಾಳಿಯ ಭೀತಿಯಲ್ಲಿ ಬದುಕುವಂತಾಗಿದೆ. ಇದು ಅಲ್ಲಿನ ಚುನಾವಣಾ ವಿಷಯವೂ ಆಗಿದೆ ಎಂದು ‘ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಬಾಂಕುಡಾದಲ್ಲಿ 12 ವಿಧಾನಸಭಾ ಕ್ಷೇತ್ರಗಳಿದ್ದು ಮೊದಲನೆಯ ಹಾಗೂ ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ಆನೆ ದಾಳಿ ತಡೆಯುವ ನಿಟ್ಟಿನಲ್ಲಿ ಶಾಶ್ವತ ಪರಿಹಾರ ದೊರೆಯಬಹುದು ಎಂಬ ನಿರೀಕ್ಷೆ ಅಲ್ಲಿನ ಜನರಲ್ಲಿದೆ ಎಂದು ವರದಿ ಉಲ್ಲೇಖಿಸಿದೆ.
ಸಂಸತ್ನಲ್ಲಿ ಕಳೆದ ವರ್ಷ ಮಂಡನೆಯಾದ ವರದಿಯ ಪ್ರಕಾರ, 2014ರಿಂದ 2019ರ ಅವಧಿಯಲ್ಲಿ ಪಶ್ಚಿಮ ಬಂಗಾಳದಲ್ಲಿ ಆನೆ ದಾಳಿಯಿಂದ 403 ಸಾವು ಸಂಭವಿಸಿದೆ. ಇದು ದೇಶದಲ್ಲೇ ಹೆಚ್ಚು.
2011ರ ನಂತರ ಆನೆ ದಾಳಿಯಿಂದ ಮೃತಪಟ್ಟವರ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಳೆದ ವರ್ಷ ಅಕ್ಟೋಬರ್ನಲ್ಲಿ ಘೋಷಿಸಿದ್ದರು. ಆದರೆ ಕಳೆದ ಕೆಲವು ವರ್ಷಗಳಲ್ಲಿ ಸರ್ಕಾರಿ ಉದ್ಯೋಗ ದೊರೆಯುವುದೇ ಕಷ್ಟ ಎನ್ನುವ ಸ್ಥಿತಿಯಲ್ಲಿದೆ ಎಂದು ವರದಿ ಉಲ್ಲೇಖಿಸಿದೆ.
ಆನೆ ದಾಳಿ ವಿಚಾರದಲ್ಲಿ ನಮ್ಮ ಮುಖ್ಯಮಂತ್ರಿಗಳು ಸೂಕ್ಷ್ಮವಾಗಿದ್ದಾರೆ. ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಹೇಳಿದ್ದಾರೆ. ಹಿಂದೆ ಅಧಿಕಾರದಲ್ಲಿದ್ದ ಎಡಪಕ್ಷಗಳ ಸರ್ಕಾರ ಏನೂ ಮಾಡಿರಲಿಲ್ಲ ಎಂದು ಬಾಂಕುಡಾದ ಛಾತ್ನಾ ಕ್ಷೇತ್ರದ ಟಿಎಂಸಿ ಅಭ್ಯರ್ಥಿ ಸುಭಾಷಿಷ್ ಬಟಾಬ್ಯಾಲ್ ಹೇಳಿದ್ದಾರೆ.
ಬಾಂಕುಡಾದ ಬಿಜೆಪಿ ಅಭ್ಯರ್ಥಿ ಸುಭಾಷ್ ಸರ್ಕಾರ್ ಸಹ ಆನೆ ದಾಳಿ ವಿಚಾರವಾಗಿ ಕ್ಷೇತ್ರದ ಜನತೆಗೆ ಆಶ್ವಾಸನೆಗಳನ್ನು ನೀಡಿದ್ದಾರೆ. ಕೇಂದ್ರ ಸರ್ಕಾರದ ವನ್ಯಜೀವಿ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಕಡೆಗಣಿಸುತ್ತಿದೆ. ನಾವು ಟಿಎಂಸಿಯಂತೆ ಕೊಟ್ಟ ಭರವಸೆ ಈಡೇರಿಸದೇ ಇರುವುದಿಲ್ಲ. ಉದ್ಯೋಗ ಕೊಡಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.