ADVERTISEMENT

ನವಲಖಾ ಜಾಮೀನು ಅರ್ಜಿ: ಎನ್‌ಐಎ ಪ್ರತಿಕ್ರಿಯೆ ಕೇಳಿದ ಬಾಂಬೆ ಹೈಕೋರ್ಟ್‌

ಪಿಟಿಐ
Published 12 ಜೂನ್ 2023, 12:50 IST
Last Updated 12 ಜೂನ್ 2023, 12:50 IST
ಬಾಂಬೆ ಹೈಕೋರ್ಟ್‌
ಬಾಂಬೆ ಹೈಕೋರ್ಟ್‌   

ಮುಂಬೈ: ಎಲ್ಗಾರ್‌ ಪರಿಷತ್‌– ಮಾವೋವಾದಿ ಸಂಪರ್ಕ ಪ್ರಕರಣದ ಆರೋಪಿ ಗೌತಮ್ ನವಲಖಾ ಅವರ ಜಾಮೀನು ಅರ್ಜಿ ಕುರಿತು ಪ್ರತಿಕ್ರಿಯೆ ನೀಡುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಬಾಂಬೆ ಹೈಕೋರ್ಟ್‌ ಸೋಮವಾರ ಹೇಳಿದೆ.

ನವಲಖಾ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಜೂನ್‌ 28ರಂದು ನಡೆಸುವುದಾಗಿ ನ್ಯಾಯಾಧೀಶರಾದ ಎ.ಎಸ್‌. ಗಡ್ಕರಿ ಮತ್ತು ಎಸ್‌.ಜಿ ದಿಗೆ ಅವರಿದ್ದ ವಿಭಾಗೀಯ ಪೀಠವು ಹೇಳಿದೆ. 

ನವಲಖಾ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ವಿಶೇಷ ಎನ್‌ಐಎ ನ್ಯಾಯಾಲಯವು ಈಗಾಗಲೇ ಎರಡು ಬಾರಿ ನಡೆಸಿದೆ. ನವಲಖಾ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗುವ ಕಾರಣ ಅವರಿಗೆ ಜಾಮೀನು ನೀಡಲಾಗುವುದಿಲ್ಲ ಎಂದು ಏಪ್ರಿಲ್‌ನಲ್ಲಿ ಅರ್ಜಿ ವಿಚಾರಣೆ ನಡೆಸಿದ ವೇಳೆ ಎನ್‌ಐಎ ನ್ಯಾಯಾಲಯ ಹೇಳಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಿನಾಂಕಗಳನ್ನು ಕೋರ್ಟ್‌ ಎದುರು ಖಚಿತಪಡಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಪೀಠ ಹೇಳಿತು. 

ADVERTISEMENT

ನವಲಖಾ ಅವರ ಅರ್ಜಿಯನ್ನು ಮತ್ತೊಮ್ಮೆ ವಿಚಾರಣೆಗೆ ಒಳಪಡಿಸಲು ವಿಶೇಷ ನ್ಯಾಯಾಲಯಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ. ವಿಚಾರಣೆ ನಡೆಸಲು ನಾಲ್ಕು ವಾರಗಳ ಗಡವು ನೀಡಿದೆ.

ಸದ್ಯ ನವಲಖಾ ಅವರು ಗೃಹಬಂಧನದಲ್ಲಿ ಇದ್ದಾರೆ. ಜಾಮೀನು ನೀಡುವಂತೆ ಕೋರಿ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆಯೂ ಅವರು ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅವರಿಗೆ ಜಾಮೀನು ನೀಡಲು ಎನ್‌ಐಎ ವಿರೋಧಿಸಿದ್ದ ಕಾರಣ ಅವರಿಗೆ ಜಾಮೀನು ದೊರಕಿರಲಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.