
ಚೆನ್ನೈ: ‘ನಕಲಿ ಮತ’ಗಳ ಮೂಲಕ ಅಧಿಕಾರಕ್ಕೆ ಬರಬಹುದು ಎಂಬ ಡಿಎಂಕೆಯ ಕನಸನ್ನು ಚುನಾವಣಾ ಆಯೋಗವು, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಮೂಲಕ ನುಚ್ಚುನೂರು ಮಾಡಿದೆ. 95 ಲಕ್ಷ ನಕಲಿ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಆಯೋಗ ತೆಗೆದು ಹಾಕಿದೆ. ಈಗ ಸೋಲಿನ ಹತಾಶೆಯಿಂದ ಡಿಎಂಕೆ ನಾಟಕವಾಡುತ್ತಿದೆ’ ಎಂದು ವಿರೋಧ ಪಕ್ಷದ ಮುಖಂಡ ಎಡಪ್ಪಾಡಿ ಕೆ. ಪಳನಿಸ್ವಾಮಿ ಆರೋಪಿಸಿದರು.
‘ಆಡಳಿತಾರೂಢ ಡಿಎಂಕೆ ಮತ್ತು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು, ಭಾರಿ ಸಂಖ್ಯೆಯಲ್ಲಿ ನಕಲಿ ಮತಗಳು ಕೈತಪ್ಪಿ ಹೋಗಿರುವುದಕ್ಕೆ, ಎಸ್ಐಆರ್ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಜನರು ಇವರ ಮೋಸದ ಬಲೆಗೆ ಬೀಳುವುದಿಲ್ಲ. ತಮಿಳುನಾಡಿನಲ್ಲಿ ಎಐಎಡಿಎಂಕೆ ಇರುವವರೆಗೂ ಯಾವುದೇ ಅರ್ಹ ಮತದಾರನಿಗೂ ಅನ್ಯಾಯವಾಗುವುದಿಲ್ಲ’ ಎಂದು ಅವರು ಹೇಳಿದರು.
‘ಎಸ್ಐಆರ್’ ಬಳಿಕ ಮತದಾರರ ಪಟ್ಟಿಯಿಂದ 97 ಲಕ್ಷ ಅನರ್ಹ ಮತದಾರರನ್ನು ತೆಗೆದುಹಾಕಲಾಗಿದೆ’ ಎಂದು ಚುನಾವಣಾ ಆಯೋಗ ಡಿ.19ರಂದು ಪ್ರಕಟಿಸಿತ್ತು. ಈ ಮೂಲಕ ತಮಿಳುನಾಡಿನಲ್ಲಿ ಮತದಾರರ ಸಂಖ್ಯೆ 6.41 ಕೋಟಿಯಿಂದ 5.43 ಕೋಟಿಗೆ ಇಳಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.