ADVERTISEMENT

ದೇಶದಲ್ಲಿ ವಿರೋಧ ಪಕ್ಷ ದುರ್ಬಲವಾಗಿದೆ: ಟಿಕಾಯತ್

ಏಜೆನ್ಸೀಸ್
Published 10 ಜೂನ್ 2021, 8:17 IST
Last Updated 10 ಜೂನ್ 2021, 8:17 IST
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಿದ್ದ ರೈತ ಮುಖಂಡ ರಾಕೇಶ್ ಟಿಕಾಯತ್
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಿದ್ದ ರೈತ ಮುಖಂಡ ರಾಕೇಶ್ ಟಿಕಾಯತ್   

ಗಾಜಿಯಾಬಾದ್ (ಉ.ಪ್ರದೇಶ): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಚರ್ಚಿಸಿದ ಒಂದು ದಿನದ ಬಳಿಕ ಪ್ರತಿಕ್ರಿಯಿಸಿರುವ ಭಾರತೀಯ ಕಿಸಾನ್ ಒಕ್ಕೂಟದ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್, ದೇಶದ ಪ್ರತಿಪಕ್ಷಗಳು ದುರ್ಬಲವಾಗಿದೆ ಎಂದು ಆರೋಪಿಸಿದ್ದಾರೆ.

'ನಾವು ರೈತರು ಬೀದಿಗಳಲ್ಲಿ ಕುಳಿತಿದ್ದೇವೆ, ಪ್ರತಿಪಕ್ಷಗಳು ಪ್ರಬಲವಾಗಿದ್ದರೆ ನಾವದನ್ನು ಮಾಡಬೇಕಾಗಿರಲಿಲ್ಲ. ಪ್ರತಿಪಕ್ಷಗಳು ಬಲಿಷ್ಠವಾಗಿರಬೇಕು. ಇದನ್ನೇ ದೀದಿ ಅವರಿಗೂ ತಿಳಿಸಿರುವುದಾಗಿ' ಹೇಳಿದ್ದಾರೆ.

ಮಮತಾ ಅವರನ್ನು ಭೇಟಿಯಾಗಲು ಕೇಂದ್ರದಿಂದ ಅನುಮತಿ ಪಡೆಯಲಾಗಿತ್ತೇ ಎಂಬುದನ್ನು ಕೇಳಿದಾಗ, 'ನಾನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದೇನೆ. ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆಯನ್ನಲ್ಲ. ನಾನು ಅಫ್ಗಾನಿಸ್ತಾನದ ಅಧ್ಯಕ್ಷರನ್ನು ಭೇಟಿ ಮಾಡಿ ಬಂದಿದ್ದೇನೆ. ಇದಕ್ಕಾಗಿ ಕೇಂದ್ರದ ಅನುಮತಿ ಬೇಕೇ? ಸಿಎಂ ಭೇಟಿಯಾಗಲು ವೀಸಾ ಅಗತ್ಯವಿದೆಯೇ?' ಎಂದು ಪ್ರಶ್ನಿಸಿದ್ದಾರೆ.

ADVERTISEMENT

'ರಾಜ್ಯ ನೀತಿಗಳ ಬಗ್ಗೆ ನಾವು ಎಲ್ಲ ಮುಖ್ಯಮಂತ್ರಿಗಳನ್ನು ಭೇಟಿಯಾಗುತ್ತೇವೆ. ಉತ್ತರಾಖಂಡದಲ್ಲಿ ಬಿಜೆಪಿ ಸರ್ಕಾರವಿದೆ. ಪಂಜಾಬ್‌ನಲ್ಲಿ ಕಾಂಗ್ರೆಸ್ ಸರ್ಕಾರವಿದೆ. ನಾವು ಅವರನ್ನು ಭೇಟಿಯಾಗುತ್ತೇವೆ. ಈ ವರೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾಗಿಲ್ಲ' ಎಂದು ತಿಳಿಸಿದ್ದಾರೆ.

ರಾಕೇಶ್ ಟಿಕಾಯತ್‌ ಮತ್ತು ಯುಧ್‌ವೀರ್ ಸಿಂಗ್ ನೇತೃತ್ವದ ರೈತ ಮುಖಂಡರೊಂದಿಗೆ ಬುಧವಾರ ಸಭೆ ನಡೆಸಿದ್ದ ಮಮತಾ ಬ್ಯಾನರ್ಜಿ, ‘ರೈತರ ಆಂದೋಲನಕ್ಕೆ ನಮ್ಮ ಬೆಂಬಲ ಇರುತ್ತದೆ’ ಎಂದು ಘೋಷಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.