ADVERTISEMENT

ಅಂತರ್ಜಲ ಬಳಕೆದಾರರಿಗೆ ಎನ್‌ಒಸಿ ನಿಯಮದಿಂದ ವಿನಾಯಿತಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 14:28 IST
Last Updated 26 ಸೆಪ್ಟೆಂಬರ್ 2020, 14:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ರೈತರು, ಗೃಹ ಬಳಕೆದಾರರು ಸೇರಿದಂತೆ 5 ವರ್ಗದ ನೀರಿನ ಬಳಕೆದಾರರಿಗೆ ಅಂತರ್ಜಲವನ್ನು ಬಳಸಲು ನಿರಾಕ್ಷೇಪಣಾ ಪತ್ರ (ಎನ್‍ಒಸಿ) ಪಡೆಯುವ ನಿಯಮದಿಂದ ಕೇಂದ್ರ ಸರ್ಕಾರ ವಿನಾಯಿತಿ ನೀಡಿದೆ.

ಈ ಸಂಬಂಧ,ಜಲ ಶಕ್ತಿ ಸಚಿವಾಲಯದ ಅಡಿಯಲ್ಲಿ ಕೇಂದ್ರ ಅಂತರ್ಜಲ ಪ್ರಾಧಿಕಾರ ಮಾರ್ಗಸೂಚಿಯನ್ನು ಹೊರಡಿಸಿದೆ. ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ, ಕೃಷಿ ಚಟುವಟಿಕೆ, ಸಶಸ್ತ್ರ ಪಡೆಗಳ ಕಚೇರಿ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಮತ್ತು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಗೃಹ ಬಳಕೆದಾರರು ಎನ್‌ಒಸಿಯನ್ನು ಪಡೆಯುವ ಅಗತ್ಯವಿಲ್ಲ ಎಂದು ತಿಳಿಸಿದೆ.

ಸ್ಥಳೀಯ ಸರ್ಕಾರಿ ನೀರು ಸರಬರಾಜು ಸಂಸ್ಥೆಯು ಅಗತ್ಯ ಪ್ರಮಾಣದ ನೀರನ್ನು ಪೂರೈಸಲು ಸಾಧ್ಯವಾಗದ ನಗರ ಪ್ರದೇಶಗಳಲ್ಲಿನ ವಸತಿ ಸಮುಚ್ಚಯಗಳು ಕುಡಿಯಲು ಮತ್ತು ಗೃಹ ಬಳಕೆಗಾಗಿ ಅಂತರ್ಜಲವನ್ನು ಹೊರತೆಗೆಯಲು ಎನ್ಒಸಿ ಪಡೆಯುವುದು ಅಗತ್ಯ ಎಂದೂ ತಿಳಿಸಿದೆ.

ADVERTISEMENT

ಅಪಾರ್ಟ್‍ಮೆಂಟ್ ಸಮುಚ್ಚಯಗಳಲ್ಲಿ ಕಡ್ಡಾಯವಾಗಿ ಒಳಚರಂಡಿ ನೀರು ಸಂಸ್ಕರಣಾ ಘಟಕಗಳನ್ನು (ಎಸ್‍ಟಿಪಿ) ಅಳವಡಿಸಬೇಕು.ಈ ನೀರನ್ನು ಉದ್ಯಾನವನ, ಶೌಚಾಲಯದ ಬಳಕೆಗೆ ಉಪಯೋಗಿಸಬೇಕು ಎಂದು ತಿಳಿಸಿದೆ.

ಈ ಮೊದಲು ಸರ್ಕಾರ ಹೊರಡಿಸಿದ್ದ ಅಧಿಸೂಚನೆಯಲ್ಲಿ ಕೆಲವು ಲೋಪ–ದೋಷಗಳು ಇವೆ ಎಂದು ರಾಷ್ಟ್ರೀಯ ಹಸಿರು ಮಂಡಳಿ ಹೇಳಿದ ನಂತರ, ಹೊಸ ಮಾರ್ಗಸೂಚಿಗಳನ್ನು ಸರ್ಕಾರ ಹೊರಡಿಸಿದೆ. ತಕ್ಷಣದಿಂದಲೇ ಇವು ಜಾರಿಗೆ ಬರಲಿವೆ.

ಎನ್‌ಒಸಿ ಷರತ್ತು ಉಲ್ಲಂಘಿಸಿದರೆ ₹ 50 ಸಾವಿರದಿಂದ ₹ 10 ಲಕ್ಷದವರೆಗೆ ದಂಡ ವಿಧಿಸಬಹುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.