ಮುಂಬೈ (ಮಹಾರಾಷ್ಟ್ರ): ಮುಂಬೈ ಕರಾವಳಿಯಲ್ಲಿ ಸಂಭವಿಸಿದ್ದ ದೋಣಿಗಳ ಡಿಕ್ಕಿ ಅವಘಡದಲ್ಲಿ ನಾಪತ್ತೆಯಾಗಿದ್ದ 7 ವರ್ಷದ ಬಾಲಕನ ಮೃತದೇಹ ಇಂದು (ಶನಿವಾರ) ಪತ್ತೆಯಾಗಿದೆ.
ಮೂರು ದಿನಗಳ ಸುದೀರ್ಘ ಶೋಧ ಕಾರ್ಯಾಚರಣೆಯ ಬಳಿಕ ನಾಪತ್ತೆಯಾಗಿದ್ದ ಬಾಲಕ ಜೋಹಾನ್ ಮೊಹಮ್ಮದ್ ನಿಸಾರ್ ಅವರ ಮೃತದೇಹ ಪತ್ತೆಯಾಗಿದೆ. ಇದರೊಂದಿಗೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ನಡುವೆ ದುರ್ಘಟನೆಗೆ ಸಂಬಂಧಿಸಿದಂತೆ ನೌಕಾಪಡೆ ತನಿಖೆ ಪ್ರಾರಂಭಿಸಿದೆ. ಎರಡೂ ದೋಣಿಗಳಲ್ಲಿದ್ದ ಒಟ್ಟು 113 ಜನರಲ್ಲಿ 15 ಮಂದಿ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಇನ್ನುಳಿದಂತೆ 98 ಜನರನ್ನು ರಕ್ಷಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಡಿ.18ರ ಸಂಜೆ 4ರ ಹೊತ್ತಿಗೆ ಗೇಟ್ವೇ ಆಫ್ ಇಂಡಿಯಾದಿಂದ ಎಲಿಫೆಂಟಾ ದ್ವೀಪಕ್ಕೆ 100ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ‘ನೀಲಕಮಲ್‘ ಎಂಬ ಪ್ರಯಾಣಿಕ ದೋಣಿಗೆ ನೌಕಾಪಡೆಯ ಗಸ್ತು ದೋಣಿ ಡಿಕ್ಕಿ ಹೊಡೆದಿತ್ತು. ಅವಘಡದಲ್ಲಿ 13 ಮಂದಿ ಮೃತಪಟ್ಟಿದ್ದರು. ಶೋಧ ಕಾರ್ಯಾಚರಣೆ ಬಳಿಕ ಗುರುವಾರ ಸಂಜೆ 43 ವರ್ಷದ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.