ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ 15 ವರ್ಷಗಳ ಹಿಂದಿನ ದೋಣಿ ದುರಂತದಲ್ಲಿಸಾವಿಗೀಡಾದ 20 ಮಕ್ಕಳ ಕುರಿತು ಪೋಸ್ಟ್ ಹಾಕಿದ್ದ ಯುವಕನ ವಿರುದ್ಧ ಶಾಂತಿ ಕದಡಿದ, ಭೀತಿ ಸೃಷ್ಟಿಸಿದ ಮತ್ತು ದಂಗೆಗೆ ಪ್ರೇರಣೆ ನೀಡಿದ ಆರೋಪದಲ್ಲಿ ದೂರು ದಾಖಲಿಸಲಾಗಿದೆ.
ಬಂಡಿಪೋರ ಜಿಲ್ಲೆಯ ಸ್ಥಳೀಯ ನ್ಯೂಸ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿರುವ ಸಾಜಿದ್ ರೈನಾ ವಾಟ್ಸ್ಆ್ಯಪ್ನಲ್ಲಿ 2006ರಲ್ಲಿ ವುಲಾರ್ ಸರೋವರದಲ್ಲಿ ನಡೆದ ದೋಣಿ ದುರುಂತದ ಬಗ್ಗೆ ಸ್ಕ್ರೀನ್ಶಾಟ್ಅನ್ನು ಸ್ಟೇಟಸ್ ಹಾಕಿದ್ದ.
ನನ್ನ ವಿರುದ್ಧದ ದೂರನ್ನು ಹಿಂಪಡೆಯುವಂತೆ ಪೊಲೀಸರಲ್ಲಿ ಬೇಡಿಕೊಂಡೆ. ದೋಣಿ ದುರಂತದಲ್ಲಿ ಸಾವಿಗೀಡದ ಮಕ್ಕಳ ಬಗ್ಗೆ ವಾಟ್ಸಾಪ್ ಸ್ಟೇಟಸ್ ಹಾಕಿದ್ದೆನಷ್ಟೆ. ಕೇವಲ ಈ ಪೋಸ್ಟ್ಗೆ ನನ್ನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು 23 ವರ್ಷದ ರೈನಾ ಹೇಳಿದ್ದಾರೆ.
ಯುವಕನ ವಿರುದ್ಧದ ದೂರನ್ನು ಸಮರ್ಥಿಸಿಕೊಂಡಿರುವ ಪೊಲೀಸರು, ಎಫ್ಐಆರ್ಅನ್ನು ಪತ್ರಕರ್ತರ ಮೇಲೆ ದಾಖಲಿಸಿಲ್ಲ ಎಂದಿದ್ದಾರೆ.
ಮೇ 30ರಂದು ಸಾಜಿದ್ ರೈನಾ ಎಂಬ ಯುವಕ ವಾಟ್ಸಾಪ್ನಲ್ಲಿ ಹಾಕಿದ್ದ ಸ್ಟೇಟಸ್ನ ಹಿಂದಿನ ಉದ್ದೇಶವೇನು ಎಂಬುದನ್ನು ತನಿಖೆ ನಡೆಸುವ ಅಗತ್ಯವಿದೆ ಎಂದು ಪೊಲೀಸರು ಹೇಳಿದ್ದಾರೆ.
2019ರ ಆಗಸ್ಟ್ ನಂತರ, ಅಂದರೆ ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ಸ್ಟೇಟಸ್ಅನ್ನು ಹಿಂತೆಗೆದುಕೊಂಡ ನಂತರ ಬಿಗಿಭದ್ರತೆಯನ್ನು ನೀಡಲಾಗಿದ್ದು, ಪತ್ರಕರ್ತರು ಬೆದರಿಕೆ, ಹಲ್ಲೆ ಮತ್ತು ಪೊಲೀಸ್ ಕೇಸ್ಗಳನ್ನು ಎದುರಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಸುಮಾರು ಡಜನ್ಗೂ ಹೆಚ್ಚು ಪತ್ರಕರ್ತರು ಪೊಲೀಸರಿಂದ ಎಫ್ಐಆರ್ ಮತ್ತು ತನಿಖೆಯನ್ನು ಎದುರಿಸಿದ್ದಾರೆ.
ಎಫ್ಐಆರ್ ಹಿಂಪಡೆಯುವುದಾಗಿ ಬಂಡಿಪೋರಾದ ಎಸ್ಎಸ್ಪಿ ಭರವಸೆ ನೀಡಿದ್ದಾರೆ. ಎಫ್ಐಆರ್ ಹಿಂಪಡೆಯುವ ಮೂಲಕ ಪೊಲೀಸರು ನನಗೆ ನ್ಯಾಯ ಕೊಡಿಸುತ್ತಾರೆ ಎಂಬ ನಂಬಿಕೆಯಿದೆ. ನನ್ನ ಭವಿಷ್ಯದ ಬಗ್ಗೆ ಮತ್ತು ನನ್ನ ವೃತ್ತಿಯ ಬಗ್ಗೆ ಪೊಲೀಸರು ಯೋಚಿಸಬೇಕು ಎಂದು ರೈನಾ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.