ADVERTISEMENT

ತೆಲಂಗಾಣದ ಕ್ರಾಂತಿಕಾರಿ ಕವಿ 'ಗದ್ದರ್‌' ನಿಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಆಗಸ್ಟ್ 2023, 11:41 IST
Last Updated 6 ಆಗಸ್ಟ್ 2023, 11:41 IST
ಗದ್ದರ್‌ (ಚಿತ್ರ: Wikipedia/
Batthini Vinay Kumar Goud)
ಗದ್ದರ್‌ (ಚಿತ್ರ: Wikipedia/ Batthini Vinay Kumar Goud)    

ಹೈದರಾಬಾದ್‌: 'ಗದ್ದರ್‌' ಎಂದೇ ಹೆಸರುವಾಸಿಯಾಗಿದ್ದ ತೆಲಂಗಾಣದ ಖ್ಯಾತ ಜಾನಪದ ಕಲಾವಿದ ಗುಮ್ಮಡಿ ವಿಠ್ಠಲ್ ರಾವ್‌ (77) ಅನಾರೋಗ್ಯದಿಂದ ಇಂದು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.‌

1949ರಲ್ಲಿ ತೆಲಂಗಾಣದ ತುಪ್ರಾನ್‌ನಲ್ಲಿ ಜನಿಸಿದ ಗದ್ದರ್‌ ಅವರು ತಮ್ಮ ಕ್ರಾಂತಿಕಾರಿ ಕವಿತೆ ಮತ್ತು ಗಾಯನದ ಮೂಲಕ ಖ್ಯಾತಿ ಪಡೆದಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇತ್ತೀಚೆಗೆ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟದಲ್ಲಿ ಗದ್ದರ್‌ ಪ್ರಮುಖ ಪಾತ್ರ ವಹಿಸಿದ್ದರು. ತಮ್ಮ ಕ್ರಾಂತಿಕಾರಿ ಸಾಹಿತ್ಯ ಮತ್ತು ಗಾಯನದ ಮೂಲಕ 'ತೆಲಂಗಾಣ ಚಳವಳಿಗೆ' ಹೊಸ ಹುರುಪನ್ನೇ ನೀಡಿದ್ದರು.

ADVERTISEMENT

2010ರವೆರೆಗೂ 'ನಕ್ಸಲಿಸಂ ಚಳವಳಿ'ಯಲ್ಲಿ ಗುರುತಿಸಿಕೊಂಡಿದ್ದ ಗದ್ದರ್‌, ತೆಲಂಗಾಣ ಪ್ರತ್ಯೇಕ ರಾಜ್ಯವಾದ ಮೂರು ವರ್ಷದ ಬಳಿಕ ಮಾವೋವಾದಿಗಳ ಸಂಪರ್ಕವನ್ನು ಸಂಪೂರ್ಣವಾಗಿ ತ್ಯಜಿಸಿದ್ದರು.

ಕಾಂಗ್ರೆಸ್‌ ಬೆಂಬಲಿಸಿದ್ದ ಗದ್ದರ್‌

2018ರ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಗದ್ದರ್‌ ಬೆಂಬಲಿಸಿದ್ದರು. ಭಾರತ್‌ ಜೋಡೊ ಯಾತ್ರೆ ಸಂದರ್ಭ ರಾಹುಲ್ ಗಾಂಧಿಯವರನ್ನೂ ಭೇಟಿ ಮಾಡಿದ್ದರು.

ಅನಾರೋಗ್ಯಕ್ಕೂ ಮೊದಲು ಚುನಾವಣಾ ಅಖಾಡಕ್ಕೆ ಇಳಿಯುವ ಕನಸನ್ನು ಕಂಡಿದ್ದ ಗದ್ದರ್‌ ಅವರು 'ಗದ್ದರ್‌ ಪ್ರಜಾ ಪಾರ್ಟಿ' ಎಂಬ ಹೊಸ ಪಕ್ಷ ಸ್ಥಾಪನೆಗೂ ಹೊರಟಿದ್ದರು. ಭವಿಷ್ಯದ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿಯೂ ಅವರು ಹೇಳಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.