ADVERTISEMENT

ತಮಿಳುನಾಡಿಗೂ ರಾಷ್ಟ್ರೀಯತಾವಾದಿ ಮನೋಭಾವ ತರಲು ಶ್ರಮ: ಅಣ್ಣಾಮಲೈ

ಪಿಟಿಐ
Published 25 ಆಗಸ್ಟ್ 2020, 18:57 IST
Last Updated 25 ಆಗಸ್ಟ್ 2020, 18:57 IST
ಬಿಜೆಪಿಗೆ ಸೇರ್ಪಡೆಯಾದ ಅಣ್ಣಾಮಲೈ ಅವರನ್ನು ಅಭಿನಂಧಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ –ಪಿಟಿಐ ಚಿತ್ರ 
ಬಿಜೆಪಿಗೆ ಸೇರ್ಪಡೆಯಾದ ಅಣ್ಣಾಮಲೈ ಅವರನ್ನು ಅಭಿನಂಧಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ –ಪಿಟಿಐ ಚಿತ್ರ    

ನವದೆಹಲಿ: ತಮಿಳುನಾಡು ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಕರ್ನಾಟಕದಲ್ಲಿ ಕಾರ್ಯನಿರ್ವಹಿಸಿದ್ದ ಮಾಜಿ ಐಪಿಎಸ್‌ ಅಧಿಕಾರಿ ಕುಪ್ಪುಸಾಮಿ ಅಣ್ಣಾಮಲೈ ಅವರು ಮಂಗಳವಾರ ಬಿಜೆಪಿಗೆ ಸೇರ್ಪಡೆಯಾಗಿದ್ದು, ತಮಿಳುನಾಡಿಗೂ‘ರಾಷ್ಟ್ರೀಯತಾವಾದಿ ಮನೋಭಾವ’ ತರುವತ್ತ ಶ್ರಮಿಸುತ್ತೇನೆ ಎಂದು ಪ್ರತಿಪಾದಿಸಿದ್ದಾರೆ.

ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ತಮಿಳುನಾಡು ಬಿಜೆಪಿ ಉಸ್ತುವಾರಿ ಪಿ.ಮುರುಳೀಧರ ರಾವ್‌ ಹಾಗೂ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಎಲ್‌.ಮುರುಗನ್‌ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದ ಅಣ್ಣಾಮಲೈ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿಯನ್ನು ಶ್ಲಾಘಿಸಿದರು. ‘ನಾಯಕತ್ವ ಗುಣಗಳಾದ ನಿರ್ಭಯತೆ, ಧೃತಿ, ಜ್ಞಾನ ಹಾಗೂ ಔದಾರ್ಯ ಮನೋಭಾವವನ್ನು ಮೋದಿ ಅವರು ಮೈಗೂಡಿಸಿಕೊಂಡಿದ್ದಾರೆ’ ಎಂದಿದ್ದಾರೆ.

‘ಬಿಜೆಪಿಯ ಧ್ಯೇಯೋದ್ದೇಶಗಳನ್ನು ಮತ್ತಷ್ಟು ಸದೃಢಗೊಳಿಸುವತ್ತ ನಾನು ಕಾರ್ಯನಿರ್ವಹಿಸುತ್ತೇನೆ. ಜೊತೆಗೆತಮಿಳುನಾಡಿಗೂ ‘ರಾಷ್ಟ್ರೀಯತಾವಾದಿ ಮನೋಭಾವ’ ತರುವತ್ತ ಶ್ರಮಿಸುತ್ತೇನೆ’ ಎಂದರು.

ADVERTISEMENT

ರಾಷ್ಟ್ರೀಯತಾವಾದಿ ಚಳವಳಿ:ತಮಿಳುನಾಡಿನಲ್ಲಿ ಎಐಡಿಎಂಕೆ ಹಾಗೂ ಡಿಎಂಕೆ ಪಕ್ಷಗಳು ಪ್ರಾಬಲ್ಯ ಹೊಂದಿದೆ. ಈ ಕಾರಣದಿಂದ ಹಲವು ಕ್ಷೇತ್ರದ ಜನರನ್ನು ಪಕ್ಷವು ಸೆಳೆಯುತ್ತಿದೆ ಎಂದು ಮುರುಳೀಧರ ರಾವ್‌ ತಿಳಿಸಿದರು. ಮುಂದಿನ ವರ್ಷದ ಮೊದಲಾರ್ಧದಲ್ಲಿ ತಮಿಳುನಾಡಿನಲ್ಲಿ ಚುನಾವಣೆ ನಡೆಯಲಿದ್ದು, ಈ ಸಂದರ್ಭದಲ್ಲಿ ರಾಷ್ಟ್ರೀಯತಾವಾದಿ ಚಳವಳಿಯನ್ನು ಸದೃಢಗೊಳಿಸುವುದು ಮುಖ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.

ನಂತರದಲ್ಲಿ ಅಣ್ಣಾಮಲೈ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.