ADVERTISEMENT

ಶ್ರದ್ಧಾ ವಾಲ್ಕರ್‌ ಕೊಲೆ ಹಿಂದೆ ದೊಡ್ಡ ಷಡ್ಯಂತ್ರವಿದೆ: ಸ್ನೇಹಿತರಿಂದ ಶಂಕೆ

ಪಿಟಿಐ
Published 26 ನವೆಂಬರ್ 2022, 11:29 IST
Last Updated 26 ನವೆಂಬರ್ 2022, 11:29 IST
ಶ್ರದ್ಧಾ ವಾಲ್ಕರ್‌
ಶ್ರದ್ಧಾ ವಾಲ್ಕರ್‌   

ಮುಂಬೈ: ಶ್ರದ್ಧಾ ವಾಲ್ಕರ್‌ ಕೊಲೆ ಹಿಂದೆ ದೊಡ್ಡ ಷಡ್ಯಂತ್ರವಿದೆ ಎಂದು ಆಕೆಯ ಆತ್ಮೀಯ ಸ್ನೇಹಿತರು ಶಂಕೆ ವ್ಯಕ್ತಪಡಿಸಿದ್ದಾರೆ. 'ಅಫ್ತಾಬ್‌ ತನ್ನನ್ನು ಕೊಲ್ಲುತ್ತಾನೆ' ಎಂದು ಈ ಹಿಂದೆ ಶ್ರದ್ಧಾ ತನ್ನ ಬಳಿ ಹೇಳಿಕೊಂಡಿದ್ದಾಗಿ ಆಕೆಯ ಮತ್ತೊಬ್ಬ ಸ್ನೇಹಿತ ತಿಳಿಸಿದ್ದಾರೆ.

ಶ್ರದ್ಧಾ ಸಂಪರ್ಕಕ್ಕೆ ಸಿಗದಿದ್ದಾಗ ಈ ಕುರಿತು ಆಕೆಯ ಪೋಷಕರನ್ನು ಎಚ್ಚರಿಸಿದ್ದ ಸ್ನೇಹಿತ, 'ಒಂದು ಬಾರಿ (ಆಕೆ ಮುಂಬೈ ಸಮೀಪದ ವಸೈನಲ್ಲಿ ನೆಲೆಸಿದ್ದಾಗ) ಮೆಸೇಜ್‌ ಮಾಡಿದ್ದಳು. ಇಲ್ಲಿಗೆ ಬಂದು ತನ್ನನ್ನು ಕರೆದುಕೊಂಡು ಹೋಗುವಂತೆ ವಿನಂತಿಸಿದ್ದಳು. ಇಲ್ಲದಿದ್ದರೆ ಪೂನಾವಾಲ ತನ್ನನ್ನು ಕೊಲ್ಲುವುದಾಗಿಯೂ ಹೇಳಿದ್ದಳು' ಎಂದು ವಿವರಿಸಿದ್ದಾರೆ.

'ಇದಾದ ಬಳಿಕ ಕೆಲವು ಸ್ನೇಹಿತರು ವಾಲ್ಕರ್‌ ನೆಲೆಸಿದ್ದ ನಿವಾಸಕ್ಕೆ ತೆರಳಿ ಪೂನವಾಲಗೆ ಎಚ್ಚರಿಕೆಯನ್ನು ನೀಡಿದ್ದರು. ನಾವು ಪೂನಾವಾಲ ವಿರುದ್ಧ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದೆವು. ಆದರೆ ಶ್ರದ್ಧಾ ನಮ್ಮನ್ನು ತಡೆದಳು' ಎಂದು ಸ್ನೇಹಿತರು ತಿಳಿಸಿದ್ದಾರೆ.

ADVERTISEMENT

'ಜುಲೈನಲ್ಲಿ ಶ್ರದ್ಧಾ ಅವರ ನಂಬರ್‌ನಿಂದ ಸಂದೇಶ ಬಂದಿತ್ತು. ಆದರೆ ಆಗಸ್ಟ್‌ ಬಳಿಕ ಆಕೆಯನ್ನು ಸಂಪರ್ಕಿಸಲು ಸಾಧ್ಯವಾಗದಿದ್ದಾಗ ಗಾಬರಿ ಆಯಿತು. ಆಕೆಯ ಮೊಬೈಲ್‌ ಸ್ವಿಚ್ಡ್‌ಆಫ್‌ ಬರುತ್ತಿತ್ತು. ನಂತರ ಆಕೆಯ ಇತರ ಸ್ನೇಹಿತರ ಜೊತೆ ವಿಚಾರಿಸಿದಾಗಲೂ ಆಕೆ ಎಲ್ಲಿದ್ದಾಳೆ ಎಂಬ ಮಾಹಿತಿ ಸಿಕ್ಕಿರಲಿಲ್ಲ' ಎಂದು ತಿಳಿಸಿದ್ದಾರೆ.

'ಆರೋಪಿ ಪೂನವಾಲ ಹಿನ್ನೆಲೆಯನ್ನು ಪೊಲೀಸರು ಪತ್ತೆ ಮಾಡಬೇಕು. ಕೊಲೆಯ ಹಿಂದೆ ದೊಡ್ಡ ಷಡ್ಯಂತ್ರವಿದೆ. ಆಕೆಗೆ ಸಮೂಹ ಮಾಧ್ಯಮದಲ್ಲಿ ಪದವಿ ಪಡೆದು ಪತ್ರಕರ್ತೆಯಾಗಬೇಕು ಎಂಬ ಹಂಬಲವಿತ್ತು. ಆಕೆಗೆ ರಂಗಭೂಮಿಯಲ್ಲೂ ಆಸಕ್ತಿಯಿತ್ತು. ಆಕೆ ತುಂಬ ಚುರುಕು ಮತ್ತು ಆಕೆಯ ವ್ಯಕ್ತಿತ್ವ ಎಂತವರನ್ನೂ ಸೆಳೆಯುವಂತದ್ದಾಗಿತ್ತು ಎಂದು' ಶ್ರದ್ಧಾರ ಸ್ನೇಹಿತರು ಹೇಳಿದ್ದಾರೆ.

'2018ರ ನಂತರ ಆಕೆಯಲ್ಲಿ ಬದಲಾವಣೆಗಳು ಆಗಿದ್ದನ್ನು ಗಮನಿಸಿದ್ದೇವೆ. ಅದು ಉತ್ತಮ ಲಕ್ಷಣವಾಗಿರಲಿಲ್ಲ. ಯಾವಾಗಲೂ ಬೇಸರದಿಂದ ಇರುವಂತೆ ಕಾಣಿಸುತ್ತಿದ್ದಳು. ನನ್ನ ಪ್ರಕಾರ ಅಫ್ತಾಬ್‌ ಆಕೆಯ ಬದುಕನ್ನು ಪ್ರವೇಶಿಸಿದ ಬಳಿಕ ಈ ಬದಲಾವಣೆಗಳು ಕಾಣಿಸಿಕೊಂಡವು. ವಾಲ್ಕರ್‌ ಮತ್ತು ಪೂನಾವಾಲ ಸಂಬಂಧ ಹೊಂದಿರುವುದು 2019ರಲ್ಲಿ ನಮಗೆ ತಿಳಿಯಿತು. ಆ ಸಂದರ್ಭ ಪೂನಾವಾಲ ಸರಳ ವ್ಯಕ್ತಿಯಂತೆ ಕಂಡುಬಂದಿದ್ದ' ಎಂದು ಸ್ನೇಹಿತರು ತಿಳಿಸಿದ್ದಾರೆ.

ಹಲವು ದಿನಗಳಿಂದ ಸಂಪರ್ಕಕ್ಕೆ ಸಿಕ್ಕಿರದಿದ್ದ ಶ್ರದ್ಧಾ ಇದೀಗ ಅಮಾನುಷವಾಗಿ ಕೊಲೆಯಾಗಿರುವ ವಿಚಾರವನ್ನು ಕೇಳಿ ಆಘಾತವಾಗಿದೆ. ಈ ಕೊಲೆಯ ಹಿಂದೆ ದೊಡ್ಡ ಷಡ್ಯಂತ್ರವಿದೆ. ಪೊಲೀಸರು ಶ್ರದ್ಧಾಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಕೆಯ ಸ್ನೇಹಿತರು ಒತ್ತಾಯಿಸಿದ್ದಾರೆ.

ಮೇ 18ರಂದು ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿ ಅಫ್ತಾಬ್‌ ಪೂನವಾಲ ಪ್ರೇಯಸಿ ಶ್ರದ್ಧಾ ವಾಲ್ಕರ್‌ ಅವರಕತ್ತುಸೀಳಿ ಕೊಂದಿದ್ದ. ಬಳಿಕ ಆಕೆಯ ದೇಹವನ್ನು ಸುಮಾರು 35 ಭಾಗಗಳಾಗಿ ಕತ್ತರಿಸಿ ಮೂರು ವಾರಗಳ ಕಾಲ ಫ್ರಿಡ್ಜ್‌ನಲ್ಲಿಟ್ಟು, ನಗರದಾದ್ಯಂತ ಹಲವು ದಿನಗಳ ಕಾಲ ಬಿಡಿ ಬಿಡಿಯಾಗಿ ಎಸೆದಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.