ಆಯೋಧ್ಯೆ: ರಾಮ ಮಂದಿರ ನಿರ್ಮಾಣಕ್ಕಾಗಿ ಅಸ್ತಿತ್ವಕ್ಕೆ ಬಂದಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಕೇಂದ್ರ ಸರ್ಕಾರ ₹1 ರೂ ದೇಣಿಗೆ ನೀಡಿತ್ತು. ಇದಾಗುತ್ತಲೇ ದೇಶದಾದ್ಯಂತ ಹಲವರು ಟ್ರಸ್ಟ್ಗೆ ದೇಣಿಗೆ ನೀಡಿದ್ದಾರೆ. ಹಾಗಾದರೆ, ಸಂಗ್ರಹವಾಗಿರುವ ಒಟ್ಟು ದೇಣಿಗೆ ಎಷ್ಟು?
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ ಟ್ರಸ್ಟ್ನ ಖಜಾಂಚಿ ಸ್ವಾಮಿ ಗೋವಿಂದ ದೇವ ಗಿರಿ. ‘ನನ್ನ ಅಂದಾಜಿನ ಪ್ರಕಾರ, ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆಗಸ್ಟ್ 4ರ ವೇಳೆಗೆ ₹30 ಕೋಟಿ ಗಳಿಸಿದೆ. ಧಾರ್ಮಿಕ ನಾಯಕ ಮೊರಾರಿ ಬಾಪು ಭಾರತೀಯ ನಿವಾಸಿಗಳಿಂದ ಸಂಗ್ರಹಿಸಿರುವ 11 ಕೋಟಿ ಹಣ ಆ.5ರಂದು ಟ್ರಸ್ಟ್ಗೆ ಬಂದು ಸೇರಲಿದೆ,’ ಎಂದು ಹೇಳಿದ್ದಾರೆ.
ವಿದೇಶಿ ದೇಣಿಗೆ
‘ಮೊರಾರಿ ಬಾಪು ಅವರು ಭಾರತೀಯರಿಂದ ಸಂಗ್ರಹಿಸಿರುವ ₹11 ಕೋಟಿಯಲ್ಲದೇ, ಅನಿವಾಸಿ ಭಾರತೀಯರಿಂದ 7 ಕೋಟಿ ಸಂಗ್ರಹವಾಗಿದೆ. ಆದರೆ, ಟ್ರಸ್ಟ್ ಅದನ್ನು ಸ್ವೀಕರಿಸಿಲ್ಲ. ಟ್ರಸ್ಟ್ಗೆ ಎಫ್ಸಿಆರ್ಎ (ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ) ಪ್ರಮಾಣ ಪತ್ರ ಸಿಗುವವರೆಗೆ ಈ ಹಣ ಪಡೆಯುವುದಿಲ್ಲ. ಅಲ್ಲಿಯವರೆಗೆ ಈ ₹7 ಕೋಟಿ ರೂ.ಗಳ ದೇಣಿಗೆಯನ್ನು ಹಾಗೆಯೇ ಇರಿಸಲಾಗುವುದು,’ ಎಂದು ಅವರು ಮಾಹಿತಿ ನೀಡಿದರು.
ಯಾವುದೇ ಷರತ್ತುಗಳನ್ನು ವಿಧಿಸದೆ ನೀಡುವ ದೇಣಿಗೆ, ಅನುದಾನ, ನೆರವು, ಸ್ಥಿರಾಸ್ತಿಗಳನ್ನು ಒಳಗೊಂಡ ಕೊಡುಗೆಗಳನ್ನು ಟ್ರಸ್ಟ್ ಸ್ವೀಕರಿಸುತ್ತದೆ. ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣಕ್ಕಾಗಿ ದಲಿತ ಸಮುದಾಯದವರೊಬ್ಬರನ್ನು ಒಳಗೊಂಡ 15 ಸದಸ್ಯರ ಟ್ರಸ್ಟ್ ಅನ್ನು ಕೇಂದ್ರ ಸರ್ಕಾರ ಫೆ.5ರಂದು ರಚನೆ ಮಾಡಿತ್ತು. ದೆಹಲಿಯ ದಕ್ಷಿಣ ವಲಯದಲ್ಲಿರುವ ಗ್ರೇಟರ್ ಕೈಲಾಶ್ ಪ್ರದೇಶದಲ್ಲಿ ಟ್ರಸ್ಟ್ನ ನೋಂದಾಯಿತ ಕಚೇರಿ ಇರಲಿದೆ ಎಂದು ಗೃಹ ಸಚಿವಾಲಯ ಅಧಿಸೂಚನೆ ತಿಳಿಸಿತ್ತು.
ಈ ಟ್ರಸ್ಟ್ಗೆ ಕೇಂದ್ರ ಸರ್ಕಾರ ಸಾಂಕೇತಿಕವಾಗಿ ₹1 ದೇಣಿಗೆ ನೀಡಿದೆ. ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನೆಯು ₹1 ಕೋಟಿ ದೇಣಿಗೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.