
ಗೋವಾ ಅಗ್ನಿ ದುರಂತ
ಗುವಾಹಟಿ: ತಮ್ಮ ಮನೆ, ರಾಜ್ಯವನ್ನು ತೊರೆದು ಉದ್ಯೋಗ ಅರಿಸಿ ಗೋವಾಕ್ಕೆ ಬಂದವರ ಬಾಳಲ್ಲಿ ಬೆಂಕಿಯ ಜ್ವಾಲೆ ಎಲ್ಲವನ್ನೂ ಆಹುತಿ ತೆಗೆದುಕೊಂಡಿದೆ.
ಉತ್ತರ ಗೋವಾದ ಅರ್ಪೋರಾ ಗ್ರಾಮದಲ್ಲಿರುವ ನೈಟ್ಕ್ಲಬ್ ‘ಬರ್ಚ್ ಬೈ ರೋಮಿಯೊ ಲೇನ್’ನಲ್ಲಿ ಶನಿವಾರ ರಾತ್ರಿ ಸಂಭವಿಸಿದ ಭಾರಿ ಅಗ್ನಿ ಅವಘಡದಲ್ಲಿ 25 ಮಂದಿ ಸಜೀವ ದಹನವಾಗಿದ್ದು, ಆರು ಜನರು ಗಾಯಗೊಂಡಿದ್ದಾರೆ.
ಅಸ್ಸಾಂನ ರಾಹುಲ್ ತಂತಿ, ದಿಗ್ನತಾ ಪತಿರ್, ಮನೋಜಿತ್ ಮಾಲ್ ಮೃತ ದುರ್ದೈವಿಗಳು. ರಾಜ್ಯದಲ್ಲಿ ತಲೆದೂರಿದ ನಿರುದ್ಯೋಗ ಸಮಸ್ಯೆಯಿಂದಲೇ ನಮ್ಮ ಮಕ್ಕಳು ಬೇರೆ ರಾಜ್ಯಕ್ಕೆ ಬದುಕುಕಟ್ಟಿಕೊಳ್ಳಲು ಹೋಗಬೇಕಾಯಿತು ಎಂದು ಪೋಷಕರು, ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೃತರು ಬುಡಕಟ್ಟು ಸಮುದಾಯಕ್ಕೆ ಸೇರಿದ್ದರು. ಈ ಮೂವರು ನೈಟ್ಕ್ಲಬ್ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಮೃತದೇಹಗಳನ್ನು ಕುಟುಂಬಗಳಿಗೆ ಹಸ್ತಾಂತರಿಸುವ ಸಂಬಂಧ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ ಎಂದೂ ಸಂಬಂಧಿಕರು ದೂರಿದ್ದಾರೆ.
ಅಸ್ಸಾಂನ ಧೇಮಾಜಿ ಜಿಲ್ಲೆಯಲ್ಲಿ ಆಗಾಗ ಪ್ರವಾಹ, ಭೂಕುಸಿತ ಸಂಭವಿಸುತ್ತದೆ. ಇಲ್ಲಿ ಜೀವನೋಪಾಯದ ಮಾರ್ಗಗಳು ಕಡಿಮೆ ಇದೆ. ಹೀಗಾಗಿಯೇ ನನ್ನ ಮಗ ಕೆಲಸಕ್ಕಾಗಿ ಗೋವಾಕ್ಕೆ ಹೋಗಿದ್ದ ಎಂದು ಪತಿರ್ ತಾಯಿ ಕಣ್ಣೀರಿಟ್ಟಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಗೋವಾದಲ್ಲಿ ಮೃತಪಟ್ಟ ಅಸ್ಸಾಂನ ಮೂವರಿಗೆ ಸಂತಾಪ ಸೂಚಿಸಿದ್ದಾರೆ. ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.