ADVERTISEMENT

3 ವರ್ಷ ಕಳೆದರೂ ಜನಗಣತಿ ನಡೆಸಲು ಮೋದಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಗೆಹಲೋತ್ ಆರೋಪ

ಪಿಟಿಐ
Published 6 ಫೆಬ್ರುವರಿ 2024, 12:46 IST
Last Updated 6 ಫೆಬ್ರುವರಿ 2024, 12:46 IST
<div class="paragraphs"><p> ಅಶೋಕ್‌ ಗೆಹಲೋತ್‌</p></div>

ಅಶೋಕ್‌ ಗೆಹಲೋತ್‌

   

ಜೈಪುರ: ದೇಶದಲ್ಲಿ ಜನಗಣತಿ ನಡೆಸಲು 2021ರ ಗಡುವು ಮುಗಿದು ಮೂರು ವರ್ಷಗಳು ಕಳೆದರೂ ಜನಗಣತಿ ನಡೆಸಲು ಮೋದಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ರಾಜಸ್ಥಾನ ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಅವರ ವಿಡಿಯೊವನ್ನು ಹಂಚಿಕೊಂಡಿರುವ ಗೆಹಲೋತ್‌, ‘ಸಮಾಜದಲ್ಲಿನ ಪ್ರತಿಯೊಂದು ಹಿಂದುಳಿದ ವರ್ಗವು ಸಾಮಾಜಿಕ ನ್ಯಾಯದ ಮೂಲಕ ತಮ್ಮ ಹಕ್ಕುಗಳನ್ನು ಪಡೆಯುವುದು ಅಗತ್ಯವಾಗಿದೆ. ದೇಶದಲ್ಲಿ ಜನಗಣತಿ ನಡೆಸಲು 2021ರ ಗಡುವು ಮುಗಿದು ಮೂರು ವರ್ಷಗಳು ಕಳೆದರೂ ಮೋದಿ ಸರ್ಕಾರಕ್ಕೆ ಜನಗಣತಿ ನಡೆಸಲು ಸಾಧ್ಯವಾಗಿಲ್ಲ. ಇದರ ಹಿಂದಿನ ಕಾರಣವನ್ನು ಕೇಂದ್ರ ಸರ್ಕಾರ ಹೇಳಬೇಕು’ ಎಂದು ಅವರು ಪ್ರಶ್ನಿಸಿದ್ದಾರೆ.

ADVERTISEMENT

ವಿಡಿಯೊದಲ್ಲಿ ಮಾತನಾಡಿರುವ ರಾಹುಲ್‌ ಗಾಂಧಿ, ದೇಶದಲ್ಲಿ ಶೇ. 50 ರಷ್ಟು ಮೀಸಲಾತಿಯ ಮಿತಿ ಇದೆ. ಇದನ್ನು ಬೇರು ಸಮೇತ ಕಿತ್ತು ಹಾಕುವುದು ಕಾಂಗ್ರೆಸ್‌ ಹಾಗೂ ‘ಇಂಡಿಯಾ’ ಮೈತ್ರಿಕೂಟದ ಗ್ಯಾರಂಟಿಯಾಗಿದೆ ಎಂದು ಹೇಳಿದ್ದಾರೆ.

ಪ್ರತಿಯೊಂದು ವರ್ಗಕ್ಕೂ ನ್ಯಾಯವನ್ನು ಒದಗಿಸಲು ಸಾಮಾಜಿಕ, ಆರ್ಥಿಕ ಮತ್ತು ಜಾತಿ ಸಮೀಕ್ಷೆಯನ್ನು ನಡೆಸಲು ಹಿಂದಿನ ಕಾಂಗ್ರೆಸ್‌ ಸರ್ಕಾರ ನಿರ್ಧರಿಸಿತ್ತು. ಅಲ್ಲದೆ, ದೇಶದಾದ್ಯಂತ ಜಾತಿ ಗಣತಿಯನ್ನು ನಡೆಸುವುದು ರಾಹುಲ್‌ ಗಾಂಧಿ ಮತ್ತು ‘ಇಂಡಿಯಾ’ ಮೈತ್ರಿಕೂಟದ ಬದ್ಧತೆಯಾಗಿದೆ ಎಂದು ಗೆಹಲೋತ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.