ಜೈಪುರ: ವಿಧಾನಸಭೆ ಅಧಿವೇಶನ ಆರಂಭಗೊಂಡ ನಂತರ ವಿಶ್ವಾಸಮತ ಯಾಚಿಸುವ ಇಂಗಿತವನ್ನು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವ್ಯಕ್ತಪಡಿಸಿದ್ದಾರೆ.
ಮತ್ತೊಂದು ಕಡೆ, ಅಧಿವೇಶನಕ್ಕೆ ರಾಜ್ಯಪಾಲರು ಸಮ್ಮತಿ ನೀಡುತ್ತಲೇ ಶಾಸಕರಿಗೆ ಒಡ್ಡಲಾಗುತ್ತಿರುವ ಹಣದ ಆಮಿಷದ ಪ್ರಮಾಣವೂ ತೀವ್ರವಾಗಿ ಹೆಚ್ಚಳಗೊಂಡಿದೆ ಎಂದೂ ಗೆಹ್ಲೋಟ್ ಆರೋಪಿಸಿದ್ದಾರೆ.
‘ನಾವು ವಿಧಾನಸಭೆಗೆ ಹೋಗುತ್ತಿದ್ದೇವೆ. ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆಯಲಿದೆ. ವಿಧಾನಸಭೆಯ ಕಲಾಪ ಸಲಹಾ ಸಮಿತಿ(ಬಿಎಸಿ) ಇದನ್ನು ನಿರ್ಧರಿಸಲಿದೆ. ಅಧಿವೇಶನದಲ್ಲಿ ಕೊರೊನಾ ವೈರಸ್ ಕುರಿತೂ ಚರ್ಚಿಸಲಾಗುತ್ತದೆ,’ ಎಂದು ಗೆಹ್ಲೋಟ್ ಹೇಳಿದರು.
‘ಅಧಿವೇಶನ ನಡೆಸಲು ಅತ್ತ ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರು ಸಮ್ಮತಿ ನೀಡುತ್ತಲೇ, ಇತ್ತ ನಮ್ಮ ಶಾಸಕರಿಗೆ ಕರೆಗಳು ಬರಲಾರಂಭಿಸಿವೆ. ಅವರಿಗೆ ಒಡ್ಡಲಾಗುತ್ತಿರುವ ಹಣದ ಆಮಿಷದ ಪ್ರಮಾಣ ದಿಢೀರ್ ಏರಿಕೆಯಾಗಿದೆ. ಈ ಹಿಂದೆ, ಮೊದಲ ಕಂತಿನಲ್ಲಿ ₹10 ಕೋಟಿ ನೀಡುವುದಾಗಿಯೂ, ನಂತರ ₹15 ಕೋಟಿ ನೀಡುವುದಾಗಿಯೂ ಹೇಳಲಾಗುತ್ತಿತ್ತು. ಈಗ ಎಷ್ಟು ಬೇಕಾದರೂ ಕೇಳುವಂತೆ ಶಾಸಕರಿಗೆ ಆಸೆ ಹುಟ್ಟಿಸಲಾಗುತ್ತಿದೆ. ಇದು ಬೆಲೆಯಲ್ಲಿ ಆದ ಏರಿಕೆಯನ್ನು ಸೂಚಿಸುತ್ತಿದೆ. ಶಾಸಕರ ಖರೀದಿಯಲ್ಲಿಯಾರು ತೊಡಗಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ,’ ಎಂದು ಅವರು ವ್ಯಂಗ್ಯವಾಡಿದ್ದಾರೆ.
‘ಈಗ ಬಂಡಾಯ ಎದ್ದಿರುವವರಲ್ಲಿ ಅದೆಷ್ಟು ಮಂದಿ ಮುಂಗಡ ಹಣ ಪಡೆದುಕೊಂಡಿದ್ದಾರೋ ಗೊತ್ತಿಲ್ಲ. ಕೆಲ ಮಂದಿಗೆ ಸಿಗದೇ ಇರುವ ಸಾಧ್ಯತೆಗಳೂ ಇವೆ. ಹೀಗಾಗಿ ಎಲ್ಲರೂ ಮತ್ತೆ ಪಕ್ಷಕ್ಕೆ ಮರಳಬೇಕು ಎಂದು ನಾನು ಕೋರುತ್ತೇನೆ,’ ಎಂದು ಅವರು ಬಂಡಾಯ ಶಾಸಕರಿಗೆ ಮನವಿ ಮಾಡಿದರು.
ರಾಜಸ್ಥಾನದ 6 ಬಿಎಸ್ಪಿ ಶಾಸಕರನ್ನು ಕಾಂಗ್ರೆಸ್ ಕಡೆಗೆ ಸೆಳೆದುಕೊಂಡಿದ್ದರ ವಿರುದ್ಧ ಆಕ್ರೋಶಗೊಂಡಿರುವ ಮಾಯಾವತಿ ಅವರ ವಿರುದ್ಧ ಮುಖ್ಯಮಂತ್ರಿ ಗೆಹ್ಲೋಟ್ ವಾಗ್ದಾಳಿ ನಡೆಸಿದರು. ಮಾಯಾವತಿ ಅವರ ನಡೆಯು ಬಿಜೆಪಿಗೆ ಪೂರಕವಾಗಿದೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.