ADVERTISEMENT

ಆರ್‌ಟಿಐ ತಿದ್ದುಪಡಿಗೆ ಲೋಕಸಭೆ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 19:35 IST
Last Updated 22 ಜುಲೈ 2019, 19:35 IST

ಉದ್ದೇಶಿತ ತಿದ್ದುಪಡಿಯು ಮಾಹಿತಿ ಆಯುಕ್ತರನ್ನು ನೇಮಕಮಾಡುವ ಮತ್ತು ವಜಾ ಮಾಡುವ ಅಧಿಕಾರವನ್ನು ಸರ್ಕಾರಕ್ಕೆ ನೀಡುತ್ತದೆ. ಇದು ಮಾಹಿತಿ ಹಕ್ಕು ಅಲ್ಲ, ಮಾಹಿತಿ ನಾಶ ಮಸೂದೆ

ನವದೆಹಲಿ: ಬಹುತೇಕ ಎಲ್ಲಾ ವಿರೋಧ ಪಕ್ಷಗಳ ಪ್ರತಿರೋಧದ ನಡುವೆಯೂ ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಸೋಮವಾರ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು.

‘ತಿದ್ದುಪಡಿ ಮಸೂದೆಯು ಒಟ್ಟಾರೆ ಕಾಯ್ದೆಯನ್ನು ದುರ್ಬಲಗೊಳಿಸುವಂಥದ್ದು ಮತ್ತು ಮಾಹಿತಿ ಆಯುಕ್ತರ ಮೇಲೆ ಸರ್ಕಾರಕ್ಕೆ ಹೆಚ್ಚಿನ ನಿಯಂತ್ರಣವನ್ನು ಕೊಡುವಂಥದ್ದು’ ಎಂದು ವಿರೋಧಪಕ್ಷಗಳು ಟೀಕಿಸಿದವು.

ADVERTISEMENT

‘ತಿದ್ದುಪಡಿ ಮಸೂದೆಯ ಬಗ್ಗೆ ಆತಂಕ ಮತ್ತು ಅನುಮಾನಪಡುವ ಅಗತ್ಯವಿಲ್ಲ. ಉದ್ದೇಶಿತ ತಿದ್ದುಪಡಿಯು ಪಾರದರ್ಶಕತೆಯನ್ನು ತಡೆಯುವಂಥದ್ದಾಗಲಿ ರಾಜ್ಯ ಸರ್ಕಾರದ ಅಧಿಕಾರವನ್ನು ಮೊಟಕುಗೊಳಿಸುವಂಥದ್ದಾಗಲಿ ಅಲ್ಲ’ ಎಂದು ಆಡಳಿತ ಪಕ್ಷವು ಹೇಳಿತು. ಆದರೆ, ಕಾಂಗ್ರೆಸ್‌, ಟಿಎಂಸಿ, ಎನ್‌ಸಿಪಿ ಹಾಗೂ ಎಡಪಕ್ಷಗಳ ಸದಸ್ಯರು ಇದನ್ನು ವಿರೋಧಿಸಿ ಸಭಾತ್ಯಾಗ ನಡೆಸಿದರು. ಬಳಿಕ ಬಹುಮತದಿಂದ ಮಸೂದೆಯನ್ನು ಅಂಗೀಕರಿಸಲಾಯಿತು.

ತಿದ್ದುಪಡಿ ಮಸೂದೆಯನ್ನು ಹಿಂತೆಗೆದುಕೊಳ್ಳಬೇಕು ಅಥವಾ ಅದನ್ನು ಸಂಸದೀಯ ಸ್ಥಾಯಿ ಸಮಿತಿಯ ಪರಿಶೀಲನೆಗೆ ಕಳುಹಿಸಬೇಕು ಎಂದು ವಿರೋಧಪಕ್ಷಗಳು ಬಯಸಿದ್ದವು.

ಮಸೂದೆಯ ಬಗ್ಗೆ ಮಾತನಾಡಿದ ಪ್ರಧಾನಿ ಕಚೇರಿ ಸಹಾಯಕ ಸಚಿವ ಜಿತೇಂದ್ರ ಸಿಂಗ್‌ ಅವರು, ‘ಕಾಯ್ದೆಗೆ ತಿದ್ದುಪಡಿ ಮಾಡಿದರೆ ಸರ್ಕಾರವು ಮಾಹಿತಿ ಆಯುಕ್ತರ ಮೇಲೆ ಒತ್ತಡ ಹೇರಲು ಆರಂಭಿಸುತ್ತದೆ ಎಂಬುದು ಊಹೆ ಮಾತ್ರ. ಮಾಹಿತಿ ಆಯುಕ್ತರ ಸ್ವಾಯತ್ತೆಯ ವಿಚಾರದಲ್ಲಿ ಯಾವುದೇ ಬದಲಾವಣೆ ಮಾಡುತ್ತಿಲ್ಲ. ನೇಮಕಾತಿಗಳನ್ನೂ ಈಗಿರುವ ರೀತಿಯಲ್ಲೇ ಮಾಡಲಾಗುವುದು. ಮಾಹಿತಿ ಹಕ್ಕು ಕಾನೂನಿನಲ್ಲಿರುವ ಕೆಲವು ಗೊಂದಲಗಳನ್ನು ನಿವಾರಿಸಿ ಕಾರ್ಯವೈಖರಿಯನ್ನು ಸುವ್ಯವಸ್ಥಿತಗೊಳಿಸುವುದಷ್ಟೇ ತಿದ್ದುಪಡಿಯ ಉದ್ದೇಶ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.